ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರ: ಪರಿಶೀಲನಾ ಸಮಿತಿ ರಚಿಸಿದ ಬಿಜೆಪಿ ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ರಾಜಕೀಯ ಹಿಂಸಾಚಾರ ನಡೆಯುತ್ತಿದೆ ಎಂಬ ಆರೋಪದ ಕುರಿತು ಪರಿಶೀಲಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನೇತೃತ್ವದಲ್ಲಿ ನಾಲ್ವರು ಸದಸ್ಯರ ಸಮಿತಿಯನ್ನು ರಚಿಸಿಲಾಗಿದೆ. ಟಿಎಂಸಿ ಪಕ್ಷದ ಮುಖ್ಯಸ್ಥೆ ಹಾಗೂ ‍ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜಕೀಯ ಹಿಂಸಾಚಾರದ ಕುರಿತು ಮೌನ ವಹಿಸಿದ್ದಾರೆ. ಅವರ (ಟಿಎಂಸಿ) ಪಕ್ಷದವರು ಪ್ರತಿಪಕ್ಷದ ಕಾರ್ಯಕರ್ತರು ಮತ್ತು ಜನರ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಸಮಿತಿಯಲ್ಲಿ ಬಿಪ್ಲಬ್ ಕುಮಾರ್ ದೇವ್‌, ರವಿಶಂಕರ್ ಪ್ರಸಾದ್, ಬ್ರಿಜ್ ಲಾಲ್ ಮತ್ತು ಕವಿತಾ ಪಾಟಿದಾರ್ ಇದ್ದಾರೆ. ಕಲ್ಕತ್ತಾ ಹೈಕೋರ್ಟ್‌ ಈ ಎಲ್ಲಾ ಬೆಳವಣಿಗೆಳನ್ನು ಗಮನಿಸಿ ರಾಜ್ಯದಲ್ಲಿ ಸಿಎಪಿಎಫ್‌ ಪಡೆಯನ್ನು ಜೂನ್‌ 21ರವರೆಗೆ ನಿಯೋಜಿಸಿದೆ. ದೇಶದಾದ್ಯಂತ ಲೋಕಸಭಾ ಚುನಾವಣೆ ನಡೆದಿದ್ದು ಎಲ್ಲಿಯೂ ರಾಜಕೀಯ ಹಿಂಸಾಚಾರ ನಡೆದಿರುವ ಬಗ್ಗೆ ನಿದರ್ಶನವಿಲ್ಲ ಎಂದು ಬಿಜೆಪಿ ಹೇಳಿದೆ. ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರ ಮುಂದುವರಿದಿದೆ. ಈ ಹಿಂದೆಯೂ 2021ರ ವಿಧಾನಸಭಾ ಚುನಾವಣೆ ನಡೆದ ಬಳಿಕವೂ ಹಿಂಸಾಚಾರ ನಡೆದಿತ್ತು ಎಂದು ಬಿಜೆಪಿ ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.