ಮಧ್ಯಪ್ರದೇಶ: ಮದ್ಯ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 58 ಬಾಲಕಾರ್ಮಿಕರ ರಕ್ಷಣೆ ರೈಸನ್: ಮಧ್ಯಪ್ರದೇಶದ ರೈಸನ್ ಜಿಲ್ಲೆಯಲ್ಲಿರುವ ಸೋಮ್ ಡಿಸ್ಟಿಲರಿ ಎಂಬ ಮದ್ಯ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 58 ಬಾಲಕಾರ್ಮಿಕರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಬಚ್‌ಪನ್‌ ಬಚಾವೋ ಆಂದೋಲನ (ಬಿಬಿಎ) ಹಾಗೂ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ಜಂಟಿಯಾಗಿ ಸೋಮ್ ಡಿಸ್ಟಿಲರಿ ಮೇಲೆ ಶನಿವಾರ ದಾಳಿ ನಡೆಸಿವೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಎನ್‌ಸಿಪಿಸಿಆರ್ ಅಧ್ಯಕ್ಷ ಪ್ರಿಯಾಂಕ್ ಕಾನುಂಗೊ ನೇತೃತ್ವದ ತಂಡ, ಸೋಮ್ ಡಿಸ್ಟಿಲರಿಯಿಂದ 19 ಬಾಲಕಿಯರು ಹಾಗೂ 39 ಬಾಲಕರು ಸೇರಿ ಒಟ್ಟು 58 ಮಕ್ಕಳನ್ನು ರಕ್ಷಿಸಿದೆ ಎಂದು ಬಿಬಿಎ ತಿಳಿಸಿದೆ. ಮಕ್ಕಳ ಕೈಗಳಲ್ಲಿ ಸುಟ್ಟ ಗಾಯಗಳಿವೆ. ರಾಸಾಯನಿಕಗಳು ಮತ್ತು ಆಲ್ಕೋಹಾಲ್‌ಗೆ ಒಡ್ಡಿಕೊಳ್ಳುವುದರಿಂದ ಗಾಯಗಳಾಗುತ್ತವೆ. ಮಕ್ಕಳನ್ನು ಪ್ರತಿದಿನ ಶಾಲಾ ಬಸ್‌ನಲ್ಲಿ ಕರೆದೊಯ್ಯುತ್ತಿದ್ದರು. 12-14 ಗಂಟೆಗಳ ಕಾಲ ಕೆಲಸ ಮಾಡಿಸುತ್ತಿದ್ದರು ಎಂದು ಬಿಬಿಎ ಹೇಳಿದೆ. ಈ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಮೋಹನ್ ಯಾದವ್, 'ರೈಸನ್ ಜಿಲ್ಲೆಯ ಕಾರ್ಖಾನೆಯೊಂದರ ಮೇಲೆ ದಾಳಿ ನಡೆಸಿದಾಗ ಬಾಲಕಾರ್ಮಿಕರ ಪ್ರಕರಣ ನನ್ನ ಗಮನಕ್ಕೆ ಬಂದಿದೆ. ಇದು ಗಂಭೀರ ವಿಷಯವಾಗಿದೆ. ಕಾರ್ಮಿಕ, ಅಬಕಾರಿ ಮತ್ತು ಪೊಲೀಸ್ ಇಲಾಖೆಗಳಿಂದ ವಿವರವಾದ ಮಾಹಿತಿ ಪಡೆಯಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ತಿಳಿಸಿದ್ದಾರೆ. रायसेन जिले में फैक्ट्री पर छापे के दौरान बालश्रम का मामला मेरे संज्ञान में आया है। यह मामला बेहद गंभीर है। इस संबंध में श्रम, आबकारी और पुलिस विभाग के अधिकारियों से विस्तृत जानकारी प्राप्त की है और समुचित कार्रवाई के निर्देश दिए हैं।‌ दोषियों के विरुद्ध कड़ी से कड़ी कार्रवाई की… ಎರಡು ದಿನಗಳ ಹಿಂದೆ ಎನ್‌ಸಿಪಿಸಿಆರ್, ಬಿಬಿಎ ದೂರಿನ ಮೇರೆಗೆ ರೈಸನ್ ಜಿಲ್ಲೆಯ ಮಂಡಿದೀಪ ಪಟ್ಟಣದ ಮೂರು ಕಾರ್ಖಾನೆಗಳಿಂದ 36 ಮಕ್ಕಳನ್ನು ರಕ್ಷಿಸಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.