ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ಟಿಡಿಪಿ ಸ್ಪರ್ಧಿಸಿದರೆ ಬೆಂಬಲ ನೀಡಲು ಯತ್ನ: ರಾವುತ್ ಮುಂಬೈ: ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ತೆಲುಗು ದೇಶಂ ಪಕ್ಷ (ಟಿಡಿಪಿ), ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ 'ಇಂಡಿಯಾ' ಮೈತಿಕೂಟದ ಎಲ್ಲ ಪಕ್ಷಗಳ ಬೆಂಬಲ ಖಚಿತಪಡಿಸಲು ಪ್ರಯತ್ನಿಸಲಿದ್ದೇವೆ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಭಾನುವಾರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ರಾವುತ್, 'ಲೋಕಸಭಾ ಸ್ಪೀಕರ್ ಆಯ್ಕೆಯು ಅತ್ಯಂತ ನಿರ್ಣಾಯಕವಾಗಿದೆ. ಒಂದು ವೇಳೆ ಬಿಜೆಪಿಗೆ ಸ್ಪೀಕರ್ ಸ್ಥಾನ ಸಿಕ್ಕರೆ, ಟಿಡಿಪಿ, ಜೆಡಿಯು, ಚಿರಾಗ್ ಪಾಸ್ವಾನ್ ಹಾಗೂ ಚಯಂತ್ ಚೌಧರಿ ಪಕ್ಷಗಳನ್ನು ಒಡೆಯಲಿದೆ' ಎಂದು ಹೇಳಿದ್ದಾರೆ. 'ಕೇಂದ್ರದಲ್ಲಿ ಸ್ಥಿರ ಸರ್ಕಾರ ಇರುವುದಿಲ್ಲ. ತನ್ನನ್ನು ಬೆಂಬಲಿಸುವ ಪಕ್ಷಗಳಿಗೆ ಬಿಜೆಪಿ ದ್ರೋಹ ಬಗೆದಿರುವ ಅನುಭವ ನಮಗಿದೆ' ಎಂದು ಅವರು ಹೇಳಿದ್ದಾರೆ. 'ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಟಿಡಿಪಿ ಬಯಸುತ್ತಿದೆ ಎಂಬ ವಿಷಯ ನನಗೆ ತಿಳಿದು ಬಂದಿದೆ. ಹಾಗಾದರೆ 'ಇಂಡಿಯಾ' ಮೈತ್ರಿಕೂಟವು ಈ ಕುರಿತು ಚರ್ಚಿಸಿ ಎಲ್ಲ ಮೈತ್ರಿ ಪಕ್ಷಗಳು ಟಿಡಿಪಿಗೆ ಬೆಂಬಲವನ್ನು ಖಚಿತಪಡಿಸಲು ಪ್ರಯತ್ನಿಸಲಿದ್ದೇವೆ' ಎಂದು ಹೇಳಿದ್ದಾರೆ. ಟಿಡಿಪಿ, ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದ ಭಾಗವಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.