ಟಿಡಿಪಿ ಅಧ್ಯಕ್ಷರಾಗಿ ಶ್ರೀನಿವಾಸ ರಾವ್ ಯಾದವ್ ನೇಮಕ ಅಮರಾವತಿ: ಟಿಡಿಪಿ ವರಿಷ್ಠ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಶಾಸಕ ಪಿ. ಶ್ರೀನಿವಾಸರಾವ್ ಯಾದವ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ವಿಶಾಖಪಟ್ಟಣಂನ ಟಿಡಿಪಿ ಸಂಸದೀಯ ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡಿರುವ ಯಾದವ್, ಹೊಸ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಲಿದ್ದಾರೆ ಎಂದು ನಾಯ್ಡು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ‘ಗಾಜುವಾಕ ಶಾಸಕ ಪಿ. ಶ್ರೀನಿವಾಸರಾವ್ ಯಾದವ್ ಅವರನ್ನು ಆಂಧ್ರಪ್ರದೇಶದ ಟಿಡಿಪಿ ಅಧ್ಯಕ್ಷರನ್ನಾಗಿ ನೇಮಿಸುತ್ತಿದ್ದೇನೆ. ಇದುವರೆಗೆ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದ ಹಿರಿಯ ನಾಯಕ ಅಚ್ಚನಾಯ್ಡು ಅವರನ್ನು ಅಭಿನಂದಿಸುತ್ತೇನೆ’ ಎಂದು ನಾಯ್ಡು ಅವರು ಟಿಡಿಪಿಯ ‘ಎಕ್ಸ್‌’ ಖಾತೆಯಲ್ಲಿ ಹೊಸ ಅಧ್ಯಕ್ಷರ ನೇಮಕಾತಿ ಪತ್ರವನ್ನು ಹಂಚಿಕೊಂಡಿದ್ದಾರೆ. ಟಿಡಿಪಿ ಅಧ್ಯಕ್ಷರಾಗಿದ್ದ ಅಚ್ಚನಾಯ್ಡು ಅವರು ಚಂದ್ರಬಾಬು ನಾಯ್ಡು ಅವರ ಸಚಿವ ಸಂಪುಟದಲ್ಲಿ ಕೃಷಿ, ಸಹಕಾರ, ಮಾರುಕಟ್ಟೆ, ಪಶುಸಂಗೋಪನೆ ಮತ್ತು ಡೇರಿ ಅಭಿವೃದ್ಧಿ ಹಾಗೂ ಮೀನುಗಾರಿಕೆ ಇಲಾಖೆಯ ಸಚಿವರಾಗಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.