ಬಾಬರಿ ಮಸೀದಿ ನೆಲಸಮದ ಬಗ್ಗೆ ವಿದ್ಯಾರ್ಥಿಗಳಿಗೆ ವಸ್ತುಸ್ಥಿತಿ ತಿಳಿಯಲಿ: ಒವೈಸಿ ಹೈದರಾಬಾದ್: ‘ಬಾಬರಿ ಮಸೀದಿ ನೆಲಸಮ ಕೃತ್ಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ‘ಅತಿರಂಜಿತ ಕ್ರಿಮಿನಲ್‌ ಕೃತ್ಯ’ಗಳನ್ನು ಓದುತ್ತಾ ಬೆಳೆಯಬಾರದು’ ಎಂದು ಎಐಎಂಐಎಂ ಅಧ್ಯಕ್ಷ, ಸಂಸದ ಅಸಾದುದ್ದೀನ್‌ ಒವೈಸಿ ಅಭಿಪ್ರಾಯಪಟ್ಟಿದ್ದಾರೆ. ಎನ್‌ಸಿಇಆರ್‌ಟಿಯ 12ನೇ ತರಗತಿ ಪರಿಷ್ಕೃತ ಪಠ್ಯಕ್ರಮ ಕುರಿತು ಎಕ್ಸ್‌ ಜಾಲತಾಣದಲ್ಲಿ ಅವರು, ‘ಬಾಬರಿ ಮಸೀದಿ ನೆಲಸಮವನ್ನು ಸುಪ್ರೀಂ ಕೋರ್ಟ್‌, ‘ಘೋರವಾದ ಕ್ರಿಮಿನಲ್‌ ಕೃತ್ಯ’ ಎಂದು ಹೇಳಿತ್ತು ಎಂಬುದೂ ವಿದ್ಯಾರ್ಥಿಗಳಿಗೆ ತಿಳಿಯಬೇಕು’ ಎಂದಿದ್ದಾರೆ. ಎನ್‌ಸಿಇಆರ್‌ಟಿ ತನ್ನ ಪರಿಷ್ಕೃತ ಪಠ್ಯಕ್ರಮದಲ್ಲಿ ಬಾಬರಿ ಮಸೀದಿಯನ್ನು ಮೂರು ಗೋಪುರಗಳಿದ್ದ ಸಂಕೀರ್ಣ ಎಂದು, ಅಯೋಧ್ಯೆ ಕುರಿತ ಸುಪ್ರೀಂ ಕೋರ್ಟ್‌ ತೀರ್ಪು ‘ಒಮ್ಮತ’ಕ್ಕೆ ಉದಾಹರಣೆ ಎಂದು ಉಲ್ಲೇಖಿಸಿದೆ ಎಂದು ಅವರು ಹೇಳಿದ್ದಾರೆ. ಮಸೀದಿಯನ್ನು ಗುಂಪೊಂದು 1992ರಲ್ಲಿ ನೆಲಸಮಗೊಳಿಸಿತು ಎಂಬುದು ವಿದ್ಯಾರ್ಥಿಗಳಿಗೆ ತಿಳಿಯಬೇಕು. ಅವರು ಅತಿರಂಜಿತ ಕ್ರಿಮಿನಲ್‌ ಕೃತ್ಯಗಳನ್ನು ಓದಿ ಬೆಳೆಯಬಾರದು ಎಂದು ಒವೈಸಿ ಪ್ರತಿಪಾದಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.