ಅಯೋಧ್ಯೆ ರಾಮ ಮಂದಿರ: ಗೇಟ್‌ ಬಳಿ ಗುಂಡು ತಗುಲಿ ಭದ್ರತಾ ಸಿಬ್ಬಂದಿ ಸಾವು ಅಯೋಧ್ಯೆ: ಅಯೋಧ್ಯೆ ರಾಮ ಮಂದಿರದ ಭದ್ರತೆಗೆ ನಿಯೋಜನೆಗೊಂಡಿದ್ದ 25 ವರ್ಷದ ಭದ್ರತಾ ಸಿಬ್ಬಂದಿ ತಮ್ಮದೇ ಬಂದೂಕಿನಿಂದ ಹಾರಿದ ಗುಂಡು ತಗುಲಿ ಮೃತಪಟ್ಟಿದ್ದಾರೆ. ಆಕಸ್ಮಿಕವಾಗಿ ಗುಂಡು ಹಾರಿ ಮೃತಪಟ್ಟಿದ್ದಾರೋ ಅಥವಾ ಆತ್ಮಹತ್ಯೆಯೋ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಸಿಬ್ಬಂದಿಯನ್ನು ಶತ್ರುಘ್ನ ವಿಶ್ವಕರ್ಮ ಎಂದು ಗುರುತಿಸಲಾಗಿದೆ. ಇವರು ವಿಶೇಷ ಭದ್ರತಾ ಪಡೆ ಸಿಬ್ಬಂದಿಯಾಗಿದ್ದರು. ಬುಧವಾರ ಬೆಳಿಗ್ಗೆ 5.25ರ ಹೊತ್ತಿಗೆ ಘಟನೆ ನಡೆದಿದೆ. ರಾಮ ಜನ್ಮಭೂಮಿಯ ಕೊಟೇಶ್ವರ ದೇವಾಲಯದ ಎದುರು ವಿಐಪಿ ಗೇಟ್‌ನಲ್ಲಿ ಕಾವಲಿಗೆ ಅವರನ್ನು ನೇಮಿಸಲಾಗಿತ್ತು. ರಾಮಮಂದಿರದ ಗರ್ಭಗುಡಿಯಿಂದ 150 ಮೀಟರ್‌ ದೂರದಲ್ಲಿ ಈ ಘಟನೆ ನಡೆದಿದೆ. ತನಿಖೆಯ ಬಳಿಕ ಸತ್ಯಾಸತ್ಯತೆ ಹೊರಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ವರ್ಷ ಆಗಸ್ಟ್ 25 ರಂದು, ರಾಮ ಜನ್ಮಭೂಮಿಯ ಭದ್ರತೆಗೆ ನಿಯೋಜಿಸಲಾಗಿದ್ದ ಪ್ರಾಂತೀಯ ಸಶಸ್ತ್ರ ಪಡೆಯ ಕಾನ್‌ಸ್ಟೆಬಲ್‌ವೊಬ್ಬರು ತಮ್ಮದೇ ಬಂದೂಕಿನಿಂದ ಹಾರಿದ ಬುಲೆಟ್‌ ತಗುಲಿ ಮೃತಪಟ್ಟಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.