ಅಖಿಲೇಶ್ ಜತೆಗಿನ ಒಡನಾಟ ಹಂಚಿಕೊಂಡ ರಾಹುಲ್ ನವದೆಹಲಿ: ಉತ್ತರ ಪ್ರದೇಶದ ಇಬ್ಬರು ಪುತ್ರರು ದೇಶದ ರಾಜಕಾರಣವನ್ನು ಪ್ರೀತಿಯಿಂದಲೇ ಮುನ್ನಡೆಸುತ್ತಾರೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರೊಂದಿಗಿನ ಒಡನಾಟವನ್ನು ರಾಹುಲ್ ಗಾಂಧಿ ಮೆಲುಕು ಹಾಕಿದ್ದಾರೆ. 54ನೇ ವಸಂತಕ್ಕೆ ಕಾಲಿಟ್ಟ ರಾಹುಲ್ ಗಾಂಧಿ ಅವರೊಂದಿಗಿನ ಸ್ನೇಹವನ್ನು ಅಖಿಲೇಶ್ ಸ್ಮರಿಸಿದ್ದಾರೆ. ಈ ವೇಳೆ ‘ಪ್ರೀತಿಯ ಅಂಗಡಿಯಲ್ಲಿ’ ಎಂಬ ಅಡಿಬರಹದಲ್ಲಿ ರಾಹುಲ್‌ ಕೈಗೊಂಡ ಯಾತ್ರೆಗಳ ಸಮಯದ ಕ್ಷಣಗಳನ್ನು ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ. 2017ರಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿ, ಸೋತಿತ್ತು. ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಈ ಅಂಶವನ್ನೇ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಇವರಿಬ್ಬರ ( ರಾಹುಲ್ ಮತ್ತು ಅಖಿಲೇಶ್‌) ಹೆಸರನ್ನು ’ಉತ್ತರ ಪ್ರದೇಶದ ಇಬ್ಬರು ಪುತ್ರರು’ ಎಂದು ಉಲ್ಲೇಖಿಸಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟದ ಭಾಗವಾಗಿ ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷ ಸ್ಪರ್ಧಿಸಿದ್ದು ಹೆಚ್ಚು ಅನುಕೂಲವಾಗಿ ಪರಿಣಮಿಸಿತು. ಉತ್ತರ ಪ್ರದೇಶದ 80 ಸ್ಥಾನಗಳ ಪೈಕಿ ಸಮಾಜವಾದಿ ಪಕ್ಷವು 37 ಸ್ಥಾನಗಳನ್ನು ಪಡೆದುಕೊಂಡಿತ್ತು, ಕಾಂಗ್ರೆಸ್‌ ಆರು ಸ್ಥಾನಗಳನ್ನು ಪಡೆದುಕೊಂಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.