ಗ್ರಾನೈಟ್‌ ಅಕ್ರಮ ಗಣಿಗಾರಿಕೆ: ಬಿಆರ್‌ಎಸ್‌ ಶಾಸಕರ ಸ್ಥಳಗಳಲ್ಲಿ ಶೋಧ ಹೈದರಾಬಾದ್‌: ಸಂಗರೆಡ್ಡಿ ಜಿಲ್ಲೆಯ ಲಕ್ದಾರಾಂನಲ್ಲಿ ಗ್ರಾನೈಟ್‌ನ ಅಕ್ರಮ ಗಣಿಗಾರಿಕೆಯನ್ನು ನಡೆಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಪಟಂಚೇರು ಕ್ಷೇತ್ರದ ಬಿಆರ್‌ಎಸ್‌ ಶಾಸಕ ಗುಡೆಮ್ ಮಹಿಪಾಲ ರೆಡ್ಡಿ ಮತ್ತು ಅವರ ಸಹೋದರ ಮಧುಸೂದನ ರೆಡ್ಡಿ ಅವರಿಗೆ ಸೇರಿದ ಏಳು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಗುರುವಾರ ಶೋಧ ನಡೆಸಿದರು. ಗ್ರಾನೈಟ್‌ನ ಅಕ್ರಮ ಗಣಿಗಾರಿಕೆಯಿಂದ ಬಂದ ಆದಾಯಕ್ಕೆ ಸಂಬಂಧಿಸಿದಂತೆ ಬಿಆರ್‌ಎಸ್‌ ಶಾಸಕ ಗುಡೆಮ್ ಮಹಿಪಾಲ ರೆಡ್ಡಿ ಅವರು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಆರೋಪಗಳನ್ನು ಎದುರಿಸುತ್ತಿದ್ದಾರೆ. ಅಕ್ರಮ ಗಣಿಗಾರಿಕೆ ಆರೋಪದ ಮೇರೆಗೆ ಮಧುಸೂದನ ರೆಡ್ಡಿ ಅವರನ್ನು ಸ್ಥಳೀಯ ಪೊಲೀಸರು ಈ ಹಿಂದೆ ಬಂಧಿಸಿದ್ದರು. ಪರಿಸರ ನಿಯಮಗಳ ಉಲ್ಲಂಘನೆ, ಪರವಾನಗಿ ಅವಧಿ ಮುಗಿದ ನಂತರವೂ ಗಣಿಗಾರಿಕೆ, ನಿಗದಿಪಡಿಸಿದ ಮಿತಿಯನ್ನು ಮೀರಿ ಗಣಿಗಾರಿಕೆ ನಡೆಸಿರುವ ಆರೋಪವನ್ನು ಇವರ ಸಂಸ್ಥೆಗಳು ಎದುರಿಸುತ್ತಿವೆ. ತೆಲಂಗಾಣದ ಅಧಿಕಾರಿಗಳು ಈಚೆಗಷ್ಟೇ ಇವರ ಕ್ವಾರಿ ಮೇಲೆ ದಾಳಿ ನಡೆಸಿದ್ದರು. ಅಕ್ರಮ ಗಣಿಗಾರಿಕೆ ಮತ್ತು ವಂಚನೆ ಆರೋಪದ ಮೇಲೆ ಸ್ಥಳೀಯ ಪೊಲೀಸರು ಮಧುಸೂದನ್ ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಬಂಧಿಸಿದ್ದರು. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ನಡೆದಿರುವ ಅಕ್ರಮಗಳನ್ನು ಬಹಿರಂಗಪಡಿಸಲು ಇದೀಗ ಇ.ಡಿ. ದಾಳಿ ನಡೆಸಿದೆ. ಸಂಗರೆಡ್ಡಿ ಕಂದಾಯ ವಿಭಾಗಾಧಿಕಾರಿ, ಟಾಸ್ಕ್‌ಫೋರ್ಸ್‌ನ ಅಧ್ಯಕ್ಷರೂ ಆಗಿರುವ ರವೀಂದ್ರ ರೆಡ್ಡಿ ನೇತೃತ್ವದಲ್ಲಿ ಈಗಾಗಲೇ ಜಿಲ್ಲಾಧಿಕಾರಿ ವಲ್ಲೂರು ಕ್ರಾಂತಿ ಅವರು ಅಕ್ರಮದ ವಿರುದ್ಧ ತನಿಖೆ ನಡೆಸುತ್ತಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.