ಸರ್ಕಾರವು ಮಣಿಪುರವನ್ನು ನಾಗರಿಕ ಯುದ್ಧಕ್ಕೆ ದೂಡುತ್ತಿದೆ: ರಾಹುಲ್ ಗಾಂಧಿ ನವದೆಹಲಿ: ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಮಣಿಪುರವನ್ನು ನಾಗರಿಕ ಯುದ್ಧಕ್ಕೆ ದೂಡುತ್ತಿದೆ ಎಂದು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯ ವೇಳೆ ಅವರು ಮಾತನಾಡಿದ್ದಾರೆ. ಜನಾಂಗೀಯ ಕಲಹ ಆರಂಭವಾದ ಬಳಿಕ ಮಣಿಪುರಕ್ಕೆ ಭೇಟಿ ನೀಡದೇ ಇರುವ ಪ್ರಧಾನಿ ನರೇಂದ್ರ ಮೋದಿ ಅವರ ನಡೆಯನ್ನೂ ಅವರು ಟೀಕಿಸಿದ್ದಾರೆ. ‘ಮಣಿಪುರದಲ್ಲಿ ಏನೂ ನಡೆದಿಲ್ಲ ಎನ್ನುವಂತೆ ಸರ್ಕಾರ ನಡೆದುಕೊಳ್ಳುತ್ತಿದೆ. ಮಣಿಪುರವನ್ನು ನಾಗರಿಕ ಯುದ್ಧಕ್ಕೆ ನೂಕಿದ್ದೀರಿ. ನಿಮ್ಮಿಂದ, ನಿಮ್ಮ ರಾಜಕೀಯದಿಂದ, ನಿಮ್ಮ ನೀತಿಗಳಿಂದ ಮಣಿಪುರ ಉರಿದಿದೆ’ ಎಂದು ಕಿಡಿಕಾರಿದ್ದಾರೆ. ‘ಪ್ರಧಾನಿಗೆ ಮಣಿಪುರ ಎಂಬ ರಾಜ್ಯ ಇದೆ ಎಂಬುದೇ ತಿಳಿದಿಲ್ಲವೆಂದು ತೋರುತ್ತದೆ. ಅಲ್ಲಿಗೆ ತೆರಳಿ ಸಂದೇಶ ಕೊಡಿ ಎಂದು ನಾವು ಪ್ರಧಾನಿಯವರಿಗೆ ಮನವಿ ಮಾಡಿದ್ದೆವು. ಆದರೆ ಅದು ನಡೆದಿಲ್ಲ. ಈ ಬಗ್ಗೆ ಪ್ರಧಾನಿಯಿಂದ ಉತ್ತರ ಸಿಗುವುದಿಲ್ಲ’ ಎಂದು ಹೇಳಿದ್ದಾರೆ. ನಿಮ್ಮ ವ್ಯವಸ್ಥೆಯಲ್ಲಿ ಮಹಿಳೆಯರನ್ನು ಸೇರಿಸಿಕೊಳ್ಳುವುದಿಲ್ಲ ಎಂಬುದು ನನಗೆ ತಿಳಿದಿದೆ. ಆದರೆ ನಾನು ಅವರ ಬಗ್ಗೆ ಮಾತನಾಡುತ್ತೇನೆ ಎಂದು ಈಶಾನ್ಯ ರಾಜ್ಯಗಳ ಮಹಿಳೆಯರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.