ಮಣಿಪುರ– ಅಸ್ಸಾಂ ಗಡಿಯಲ್ಲಿ ಭದ್ರತಾ ಸಮಸ್ಯೆ; ಮುಖ್ಯಮಂತ್ರಿಗಳ ಭೇಟಿ ಇಂಫಾಲ್‌: ಅಂತರರಾಜ್ಯ ಗಡಿಯಾದ ಜಿರೀಬಾಮ್‌– ಕಛಾರ್‌ನಲ್ಲಿಯ ಭದ್ರತಾ ಸಮಸ್ಯೆ ಕುರಿತು ಚರ್ಚೆ ನಡೆಸುವ ಸಲುವಾಗಿ ಮಣಿಪುರ ಮುಖ್ಯಮಂತ್ರಿ ಬಿರೇನ್‌ ಸಿಂಗ್‌ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಅವರು ಗುವಾಹಟಿಯಲ್ಲಿ ಭೇಟಿಯಾಗಿದ್ದರು ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಜೂನ್‌ ಮೊದಲ ವಾರದಲ್ಲಿ ಮಣಿಪುರದ ಜಿರಿಬಮ್‌ನಲ್ಲಿ ಹಿಂಸಾಚಾರ ನಡೆದಿತ್ತು. ಆ ವೇಳೆ ಹಲವರು ಪಕ್ಕದ ರಾಜ್ಯ ಅಸ್ಸಾಂನ ಕಾಚರ್‌ನಲ್ಲಿ ಆಶ್ರಯ ಪಡೆದರು. ಈ ಹಿನ್ನೆಲೆಯಲ್ಲಿ ಚರ್ಚೆ ನಡೆಸುವ ಸಲುವಾಗಿ ಬಿರೇನ್‌ ಸಿಂಗ್‌ ಮತ್ತು ತಮ್ಮ ಸಂಪುಟ ಸಚಿವ ಎಲ್‌. ಸುಸಿಂದ್ರೊ ಸಿಂಗ್‌ ಜೊತೆ ಶನಿವಾರ ರಾತ್ರಿ ಗುವಾಹಟಿಗೆ ತೆರಳಿದರು. ಅವರು ಭಾನುವಾರ ರಾಜ್ಯಕ್ಕೆ ವಾಪಸ್ಸಾಗಲಿದ್ದಾರೆ ಎನ್ನಲಾಗಿದೆ. ಜಿರೀಬಾಮ್‌ನಿಂದ ಆಶ್ರಯ ಅರಸಿ ಬಂದವರಿಗೆ ಅಗತ್ಯ ಮಾನವೀಯ ನೆರವು ಒದಗಿಸುವಂತೆ ಹಿಮಂತ ಅವರು ಶನಿವಾರವಷ್ಟೇ ಅಧಿಕಾರಿಗಳಿಗೆ ಸೂಚಿಸಿದ್ದರು. ಅಸ್ಸಾಂ ಮತ್ತು ಮಣಿಪುರ ಗಡಿಯಾದ್ಯಂತ ಭದ್ರತೆ ಹೆಚ್ಚಿಸಲಾಗಿದೆ. ಮಣಿಪುರದಲ್ಲಿ ಮೈತೇಯಿ ಸಮುದಾಯ ಮತ್ತು ಕುಕಿ ಬುಡಕಟ್ಟು ಸಮುದಾಯದ ನಡುವೆ ಕಳೆದ ವರ್ಷ ಮೇ ತಿಂಗಳಿಂದಲೂ ಘರ್ಷಣೆ ನಡೆಯುತ್ತಿದೆ. ಆದರೆ ಈ ಸಂಘರ್ಷ ಜೂನ್‌ವರೆಗೆ ಜಿರಿಬಾಮ್‌ಗೆ ತಲುಪಿರಲಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.