ಮಾಯಾವತಿ ಉತ್ತರಾಧಿಕಾರಿಯಾಗಿ ಆಕಾಶ್‌ ಆನಂದ್‌ ಆಯ್ಕೆ ಲಖನೌ: ಸೋದರಳಿಯ ಆಕಾಶ್‌ ಆನಂದ್‌ ಅವರೇ ತಮ್ಮ ಉತ್ತರಾಧಿಕಾರಿ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಅಧ್ಯಕ್ಷೆ ಭಾನುವಾರ ಘೋಷಿಸಿದ್ದಾರೆ. ಜೊತೆಗೆ ಅವರನ್ನೇ ಪಕ್ಷದ ರಾಷ್ಟ್ರೀಯ ಸಂಚಾಲಕರನ್ನಾಗಿಯೂ ನೇಮಿಸಿದ್ದಾರೆ. ಲೋಕಸಭೆ ಚುನಾವಣೆ ನಡೆಯುತ್ತಿದ್ದ ವೇಳೆಯೇ ಆಕಾಶ್‌ ಅವರನ್ನು ಪಕ್ಷದ ಸಂಚಾಲಕ ಹುದ್ದೆಯಿಂದ ಕೆಳಗಿಳಿಸಿದ್ದ ಮಾಯಾವತಿ, ಅವರನ್ನು ಅಪ್ರಬುದ್ಧ ಎಂದೂ ಕರೆದಿದ್ದರು. ಪಕ್ಷದ ರಾಷ್ಟ್ರಮಟ್ಟದ ಸಭೆಯು ಭಾನುವಾರ ನಡೆಯಿತು. ಸಭೆಯಲ್ಲಿ ಬಿಡುಗಡೆ ಮಾಡಲಾದ ಪ್ರಕಟಣೆಯಲ್ಲಿ, ‘ಬಿಎಸ್‌ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರು ಆಕಾಶ್‌ ಆನಂದ್‌ಗೆ ತಮ್ಮ ಹಿಂದಿನ ಹುದ್ದೆಯನ್ನು ಮರಳಿ ನೀಡಿದ್ದಾರೆ. ಆಕಾಶ್‌ ಅವರೇ ಮಾಯಾವತಿ ಅವರ ಉತ್ತರಾಧಿಕಾರಿಯಾಗಿ ಮುಂದುವರಿಯಲಿದ್ದಾರೆ’ ಎಂದು ಹೇಳಲಾಗಿದೆ. ‘ಪಕ್ಷ ಹಿತದೃಷ್ಟಿಯಿಂದ ಆಕಾಶ್‌ ಪ್ರಬುದ್ಧ ನಾಯಕನಾಗಿ ಹೊರಹೊಮ್ಮಲಿದ್ದಾನೆ ಎಂಬ ವಿಶ್ವಾಸವಿದೆ. ಮೊದಲಿಗಿಂತಲೂ ಹೆಚ್ಚಿನ ಗೌರವ ನೀಡುವ ಮೂಲಕ ಪಕ್ಷದ ಸದಸ್ಯರು ಆತನನ್ನು ಪ್ರೋತ್ಸಾಹಿಸಲಿದ್ದಾರೆ. ಭವಿಷ್ಯದಲ್ಲಿ ಅವನು ನನ್ನ ನಿರೀಕ್ಷೆ ಈಡೇರಿಸಲಿದ್ದಾನೆ ಎಂಬ ನಂಬಿಕೆಯಿದೆ’ ಎಂದು ಮಾಯಾವತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಕಾಶ್‌ ಆನಂದ್‌ ತಮ್ಮ ಉತ್ತರಾಧಿಕಾರಿ ಎಂದು ಮಾಯಾವತಿ ಅವರು ಕಳೆದ ವರ್ಷ ಡಿಸೆಂಬರ್‌ನಲ್ಲಿ ಘೋಷಿಸಿದ್ದರು. ಲೋಕಸಭೆ ಚುನಾಣೆಯ ಮೂರನೇ ಹಂತದ ಮತದಾನ ನಡೆಯುವ ವೇಳೆ ತಮ್ಮ ನಿರ್ಧಾರ ಬದಲಿಸಿದ್ದರು. ಚುನಾವಣಾ ಪ್ರಚಾರದ ವೇಳೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದರು ಎಂಬ ಆರೋಪದ ಮೇರೆಗೆ ಅವರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆಯ ಅಡಿ ದೂರು ದಾಖಲಾಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.