ಬುಧವಾರದಿಂದ ‘ಇಂಡಿಯಾ ಸ್ಪೇಸ್‌ ಕಾಂಗ್ರೆಸ್‌’ ಆರಂಭ ನವದೆಹಲಿ: ಸ್ಯಾಟ್‌ಕಾಮ್‌ ಇಂಡಸ್ಟ್ರಿ ಅಸೋಸಿಯೇಷನ್–ಇಂಡಿಯಾ ಆಯೋಜಿಸಿರುವ ‘ಇಂಡಿಯಾ ಸ್ಪೇಸ್‌ ಕಾಂಗ್ರೆಸ್‌’ (ಐಎಸ್‌ಸಿ) ಮೂರು ದಿನಗಳ ಸಭೆಯಲ್ಲಿ ನೀತಿ ನಿರೂಪಕರು, ವಿವಿಧ ದೇಶಗಳ ಬಾಹ್ಯಾಕಾಶ ಸಂಸ್ಥೆಗಳ ನಿರ್ವಾಹಕರು ಮತ್ತು ಇತರ ಉದ್ಯಮಿಗಳು ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬುಧವಾರದಿಂದ ಈ ಸಭೆ ಪ್ರಾರಂಭವಾಗಲಿದೆ. ಈ ಬಾರಿ ‘ಗಡಿ ನಿರ್ಮಾಣ ಮತ್ತು ನಾಳೆಗಳ ಪರಿವರ್ತನೆ’ ಎಂಬ ವಿಷಯದ ಆಧಾರದ ಮೇಲೆ ಈ ಸಭೆ ಆಯೋಜನೆಗೊಂಡಿದೆ. ಅಂತರರಾಷ್ಟ್ರೀಯ ಸಹಭಾಗಿತ್ವದ ಮೂಲಕ ಭಾರತದ ಬಾಹ್ಯಾಕಾಶ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಯತ್ನದೊಂದಿಗೆ ಸಭೆ ನಡೆಯಲಿದೆ. ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್‌, ಭಾರತದ ಬಾಹ್ಯಾಕಾಶ ನಿಯಂತ್ರಕ ಇನ್‌–ಸ್ಪೇಸ್‌ ಮುಖ್ಯಸ್ಥ ಪವನ್‌ ಕುಮಾರ್ ಗೋಯೆಂಕಾ, ಇಟಲಿ ಮತ್ತು ಆಸ್ಟ್ರೇಲಿಯಾಗಳ ಬಾಹ್ಯಾಕಾಶ ಸಂಸ್ಥೆಯ ನಿರ್ವಾಹಕರು ಮತ್ತು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷ ಅನೀಲ್‌ ಕುಮಾರ್‌ ಲಹೋಟಿ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ. ಬಾಹ್ಯಾಕಾಶ ಶೋಧಗಳಲ್ಲಿ ನಾವೀನ್ಯ ಮತ್ತು ಪ್ರಗತಿಗೆ ಉತ್ತೇಜನ, ಸ್ಟಾರ್ಟ್‌ಅಪ್‌ಗಳಿಗೆ ವೇದಿಕೆ ಮತ್ತು ಶೈಕ್ಷಣಿಕ ಒಳನೋಟ, ಸರ್ಕಾರ, ಉದ್ಯಮ ಮತ್ತು ಸ್ಟಾರ್ಟ್‌ಅಪ್‌ಗಳನ್ನು ಭವಿಷ್ಯದ ಸಾಧ್ಯತೆಯ ದೃಷ್ಟಿಯಿಂದ ಒಗ್ಗೂಡಿಸುವ ಗುರಿಯನ್ನು ಈ ಸಭೆ ಹೊಂದಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.