ಬಿಆರ್‌ಎಸ್‌ಗೆ ಮತ್ತೆ ಆಘಾತ: ಶಾಸಕ ಸಂಜಯ್ ಕುಮಾರ್ ಕಾಂಗ್ರೆಸ್ ಸೇರ್ಪಡೆ ಹೈದರಾಬಾದ್‌: ತೆಲಂಗಾಣದಲ್ಲಿ ಪ್ರತಿಪಕ್ಷ ಬಿಆರ್‌ಎಸ್‌ಗೆ ಮತ್ತೊಮ್ಮೆ ಹಿನ್ನಡೆಯಾಗಿದ್ದು, ಪಕ್ಷದ ಪ್ರಮುಖ ಶಾಸಕ ಸಂಜಯ್ ಕುಮಾರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಸಂಜಯ್‌ ಕುಮಾರ್ ಅವರನ್ನು ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ಪಕ್ಷಕ್ಕೆ ಸ್ವಾಗತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕುಮಾರ್ ಕಾಂಗ್ರೆಸ್ ಸೇರಿದ ಐದನೇ ಬಿಆರ್‌ಎಸ್ ಶಾಸಕರಾಗಿದ್ದಾರೆ. ಜೂನ್ 21ರಂದು ಹಿರಿಯ ಬಿಆರ್‌ಎಸ್ ಶಾಸಕ ಮತ್ತು ಮಾಜಿ ವಿಧಾನಸಭಾ ಸ್ಪೀಕರ್ ಪೋಚಾರಂ ಶ್ರೀನಿವಾಸ್ ರೆಡ್ಡಿ ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಇದರ ಬೆನ್ನಲ್ಲೇ ಸಂಜಯ್ ಕುಮಾರ್ ಪಕ್ಷ ಬದಲಾಯಿಸಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ ಸಂಜಯ್ ಕುಮಾರ್ ಅವರು ಎರಡನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದರು. ಇದಕ್ಕೂ ಮುನ್ನ ಬಿಆರ್‌ಎಸ್ ಶಾಸಕರಾದ ಕಡಿಯಂ ಶ್ರೀಹರಿ, ದಾನಂ ನಾಗೇಂದರ್ ಮತ್ತು ತಲ್ಲಂ ವೆಂಕಟ್ ರಾವ್ ಅವರು ಕಾಂಗ್ರೆಸ್‌ ಸೇರಿದ್ದರು. ಇವರಲ್ಲದೇ ಹೈದರಾಬಾದ್ ಮೇಯರ್ ವಿಜಯಲಕ್ಷ್ಮಿ ಆರ್. ಗದ್ವಾಲ್ ಸೇರಿದಂತೆ ಹಲವು ಬಿಆರ್‌ಎಸ್ ನಾಯಕರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಬಿಆರ್‌ಎಸ್‌ ಶಾಸಕರು ಕಾಂಗ್ರೆಸ್‌ ಸೇರುವ ಸಾಧ್ಯತೆಯಿದೆ ಎಂಬ ವದಂತಿ ರಾಜ್ಯ ರಾಜಕಾರಣದಲ್ಲಿ ಕೇಳಿಬಂದಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.