ಮೇಘಸ್ಫೋಟ: ಇಟಾನಗರದಲ್ಲಿ ಭೂಕುಸಿತ; ಪ್ರವಾಹ ಇಟಾನಗರ್‌: ‘ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರದಲ್ಲಿ ಭಾನುವಾರ ಬೆಳಿಗ್ಗೆ ಮೇಘಸ್ಫೋಟ ಸಂಭವಿಸಿದ್ದು, ಹಲವೆಡೆ ಭೂಕುಸಿತದ ಜೊತೆಗೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘ರಾಜ್ಯದಲ್ಲಿ ಕಳೆದ ವಾರ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗಿತ್ತು. ಕಳೆದೆರಡು ದಿನಗಳಿಂದ ಪರಿಸ್ಥಿತಿ ಸುಧಾರಿಸಿತ್ತು. ಹವಾಮಾನ ಇಲಾಖೆ ಕೂಡ ಭಾನುವಾರ ರಾಜ್ಯದಲ್ಲಿ ಮಳೆಯಾಗುವ ಕುರಿತು ಯಾವುದೇ ಮಾಹಿತಿ ನೀಡಿರಲಿಲ್ಲ’ ಎಂದು ಅವರು ತಿಳಿಸಿದರು. ‘ಬೆಳಿಗ್ಗೆ 10.30ರ ಸುಮಾರಿಗೆ ಮೇಘಸ್ಫೋಟ ಸಂಭವಿಸಿದ ಬೆನ್ನಲ್ಲೇ ಇಟಾನಗರ ಸೇರಿದಂತೆ ಅದಕ್ಕೆ ಹೊಂದಿಕೊಂಡಿರುವ ಹಲವೆಡೆ ಭೂಕುಸಿತದ ವರದಿಯಾಗಿದೆ. ರಾಷ್ಟ್ರೀಯ ಹೆದ್ದಾರಿ–415ರ ತಾಗಿಕೊಂಡಂತೆ ಹಲವು ಕಡೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ’ ಎಂದು ವಿಪತ್ತು ನಿರ್ವಹಣಾ ವಿಭಾಗದ ಅಧಿಕಾರಿರೊಬ್ಬರು ತಿಳಿಸಿದರು. ‘ರಾಜ್ಯದ ಜನರ ಪ್ರಮುಖ ಕೊಂಡಿಯಾದ ಹೆದ್ದಾರಿಯಲ್ಲೇ ಹಲವು ವಾಹನಗಳು ಜಖಂಗೊಂಡಿದೆ. ಭೂಕುಸಿತದ ಪ್ರದೇಶ ಹಾಗೂ ನದಿಗೆ ಇಳಿಯದಂತೆ ಜನರಿಗೂ ಸೂಚಿಸಲಾಗಿದ್ದು, ಹೆಚ್ಚಿನ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಜಿಲ್ಲಾಡಳಿತವು ತಿಳಿಸಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ‘ಜಿಲ್ಲಾಡಳಿತವು ಈಗಾಗಲೇ ಏಳು ಕಡೆಗಳಲ್ಲಿ ನಿರಾಶ್ರಿತ ಶಿಬಿರವನ್ನು ತೆರೆದಿದೆ’ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.