ದೆಹಲಿಯ ಹಲವು ಪ್ರದೇಶ ಜಲಾವೃತ | ಎಎಪಿ ಸರ್ಕಾರದ ವೈಫಲ್ಯವೇ ಕಾರಣ: ಬಿಜೆಪಿ ನವದೆಹಲಿ: ಕಳೆದ ವಾರ ಸುರಿದ ಮಳೆಯಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉಂಟಾಗಿರುವ ಜಲಾವೃತ ಸಮಸ್ಯೆಗಳಿಗೆ ಎಎಪಿ ಸರ್ಕಾರದ ಆಡಳಿತ ವೈಫಲ್ಯವೇ ಕಾರಣ ಎಂದು ಬಿಜೆಪಿ ಆರೋಪಿಸಿದೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ವಿರೇಂದ್ರ ಸಚ್‌ದೇವ ‘ನೀರಿನ ಒಳಚರಂಡಿ ಪಂಪ್‌ಗಳ ಸಮರ್ಪಕ ನಿರ್ವಹಣೆಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಸರ್ಕಾರದ ವೈಫಲ್ಯವೇ ಜೂನ್‌ 28ರಂದು ನಗರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಲು ಪ್ರಮುಖ ಕಾರಣ’ ಎಂದು ಆರೋಪಿಸಿದ್ದಾರೆ. ಜೂನ್‌ 28ರಂದು ದೆಹಲಿಯಲ್ಲಿರುವ ಒಟ್ಟು 696 ಶಾಶ್ವತ ನೀರಿನ ಒಳಚರಂಡಿ ಪಂಪ್‌ಗಳ ಪೈಕಿ 400 ಪಂಪ್‌ಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಈಗಲೂ ಸುಮಾರು 300 ಪಂಪ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಮತ್ತೆ ಮಳೆಯಾದರೆ, ದೆಹಲಿಯಲ್ಲಿ ಪ್ರವಾಹವಾಗುತ್ತದೆ ಎಂದು ಅವರು ತಿಳಿಸಿದರು. ಇದಕ್ಕೆ ತಿರುಗೇಟು ನೀಡಿರುವ ಎಎಪಿ ಸರ್ಕಾರ, ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅಧೀನದಲ್ಲಿರುವ ದೆಹಲಿ ಮುನ್ಸಿಪಲ್‌ ಕೌನ್ಸಿಲ್‌ (ಎನ್‌ಡಿಎಂಸಿ) ಪ್ರದೇಶಗಳಲ್ಲಿಯೇ ಹೆಚ್ಚು ಪ್ರವಾಹ ಸಂಭವಿಸಿದೆ. ವಾಸ್ತವವನ್ನು ಮರೆಮಾಚಲು ಬಿಜೆಪಿ ದೆಹಲಿ ಸರ್ಕಾರದತ್ತ ಬೊಟ್ಟು ಮಾಡುತ್ತಿದೆ ಎಂದು ಹೇಳಿದೆ. ಮುಂದಿನ ಎರಡು ದಿನಗಳ ಕಾಲ ದೆಹಲಿಯಲ್ಲಿ ಮಳೆಯಾಗಲಿದೆ ಎಂದು ಸೂಚನೆ ನೀಡಿರುವ ಹವಾಮಾನ ಇಲಾಖೆ ‘ಆರೆಂಜ್‌’ ಅಲರ್ಟ್‌ ಘೋಷಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.