ಪ್ರಶ್ನೆಪತ್ರಿಕೆ ಸೋರಿಕೆ; ಆರು ಮಂದಿ ಬಂಧನ ಲಖನೌ: ಪರಿಶೀಲನಾ ಅಧಿಕಾರಿ ಮತ್ತು ಸಹಾಯಕ ಪರಿಶೀಲನಾ ಅಧಿಕಾರಿ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆಯು (ಎಸ್‌ಟಿಎಫ್‌) ಭಾನುವಾರ ಪ್ರಿಂಟಿಂಗ್ ಪ್ರೆಸ್‌ನ ನೌಕರ ಸೇರಿದಂತೆ ಆರು ಮಂದಿಯನ್ನು ಬಂಧಿಸಿದೆ. ಆರು ಮಂದಿಯನ್ನು ಪ್ರಯಾಗ್‌ರಾಜ್‌ನಲ್ಲಿ ಬಂಧಿಸಲಾಗಿದೆ ಎಂದು ಎಸ್‌ಟಿಎಫ್‌ ಪ್ರಕಟಣೆಯಲ್ಲಿ ತಿಳಿಸಿದೆ. ಉತ್ತರ ಪ್ರದೇಶ ಲೋಕಸೇವಾ ಆಯೋಗವು (ಯುಪಿಪಿಎಸ್‌ಸಿ) ಫೆಬ್ರುವರಿ 11ರಂದು ಪರೀಕ್ಷೆ ನಡೆಸಿತ್ತು. ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮಾರ್ಚ್ 2ರಂದು ಪರೀಕ್ಷೆಯನ್ನು ರದ್ದುಗೊಳಿಸಿತ್ತು. ಭೋಪಾಲ್‌ನ ಸುನಿಲ್ ರಘುವಂಶಿ, ಪ್ರಿಂಟಿಂಗ್ ಪ್ರೆಸ್ ನೌಕರನಾದ ಬಿಹಾರದ ಮಧುಬನಿಯ ಸುಭಾಷ್‌ ಪ್ರಕಾಶ್, ಪ್ರಯಾಗ್‌ರಾಜ್‌ನ ವಿಶಾಲ್ ದುಬೆ ಮತ್ತು ಸಂದೀಪ್ ಪಾಂಡೆ, ಗಯಾದ ಅಮರ್‌ಜೀತ್ ಶರ್ಮಾ ಹಾಗೂ ಬಲ್ಲಿಯಾದ ವಿವೇಕ್ ಉಪಾಧ್ಯಾಯ ಬಂಧಿತರು. ಬಂಧಿತರಿಂದ ಒಂದು ಲ್ಯಾಪ್‌ಟಾಪ್, ಆರು ಮೊಬೈಲ್ ಫೋನ್‌ಗಳು, ಐದು ಖಾಲಿ ಚೆಕ್‌ಗಳನ್ನು ವಶ‍ಪಡಿಸಿಕೊಳ್ಳಲಾಗಿದೆ ಎಂದು ಎಸ್‌ಟಿಎಫ್‌ ತಿಳಿಸಿದೆ. ಈ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿಯನ್ನು ಬಂಧಿಸಲಾಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.