ವಿದ್ಯುತ್ ಖರೀದಿ ಅಕ್ರಮ: ನ್ಯಾ.ನರಸಿಂಹ ರೆಡ್ಡಿ ಆಯೋಗ ರದ್ದತಿಗೆ ಕೆಸಿಆರ್‌ ಅರ್ಜಿ ಹೈದರಾಬಾದ್: ‌ವಿದ್ಯುತ್ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ತನಿಖೆಗೆ ತೆಲಂಗಾಣ ಸರ್ಕಾರ ರಚಿಸಿರುವ ನ್ಯಾಯಮೂರ್ತಿ ನರಸಿಂಹ ರೆಡ್ಡಿ ಆಯೋಗವನ್ನು ರದ್ದುಪಡಿಸುವಂತೆ ಕೋರಿ ಬಿಆರ್‌ಎಸ್ ಪಕ್ಷದ ಮುಖ್ಯಸ್ಥ ಕೆ.ಚಂದ್ರಶೇಖರ ರಾವ್ (ಕೆಸಿಆರ್) ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಬಿಆರ್‌ಎಸ್ ಆಡಳಿತ ನಡೆಸಿದ 2014ರಿಂದ 2023ರವರೆಗಿನ ಅವಧಿಯಲ್ಲಿ ವಿದ್ಯುತ್ ಖರೀದಿ ಒಪ್ಪಂದಗಳು ಸೇರಿದಂತೆ ವಿದ್ಯುತ್ ಕ್ಷೇತ್ರದಲ್ಲಿ ನಡೆದಿರುವ ಅಕ್ರಮಗಳ ತನಿಖೆಗಾಗಿ ನ್ಯಾಯಮೂರ್ತಿ ನರಸಿಂಹ ರೆಡ್ಡಿ ನೇತೃತ್ವದ ಏಕವ್ಯಕ್ತಿ ನ್ಯಾಯಾಂಗ ಆಯೋಗವನ್ನು ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಮಾರ್ಚ್ 14ರಂದು ರಚನೆ ಮಾಡಿದ್ದರು. ಆಯೋಗವು ಇದುವರೆಗೆ ಹುದ್ದೆಯಲ್ಲಿರುವ ಮತ್ತು ನಿವೃತ್ತರಾಗಿರುವ 25 ಅಧಿಕಾರಿಗಳ ಹೇಳಿಕೆಗಳನ್ನು ದಾಖಲಿಸಿದೆ. ಕೆಲ ದಿನಗಳ ಹಿಂದೆ ಆಯೋಗಕ್ಕೆ ಪತ್ರ ಬರೆದಿದ್ದ ಕೆಸಿಆರ್, ‘ತೀವ್ರ ವಿದ್ಯುತ್ ಸಮಸ್ಯೆ ಅನುಭವಿಸುತ್ತಿದ್ದ ರಾಜ್ಯದಲ್ಲಿ ತಮ್ಮ ಬಿಆರ್‌ಎಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಲ್ಲ ವಲಯಗಳಿಗೂ ದಿನದ 24 ಗಂಟೆಯೂ ವಿದ್ಯುತ್ ಪೂರೈಕೆ ಮಾಡಲಾಗಿತ್ತು. ಹಿಂದಿನ ತಮ್ಮ ಸರ್ಕಾರದ ಜನಪ್ರಿಯತೆಗೆ ಕುತ್ತು ತರುವ ಉದ್ದೇಶದಿಂದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವು ನ್ಯಾಯಾಂತ ತನಿಖೆಗೆ ಆದೇಶಿಸಿದೆ’ ಎಂದು ಪ್ರತಿಪಾದಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.