ಕಂಗನಾ ಮೇಲೆ ಹಲ್ಲೆ ಮಾಡಿದ್ದ CISFನ ಕೌರ್ ಬೆಂಗಳೂರು ಏರ್‌ಪೋರ್ಟ್‌ಗೆ ಎತ್ತಂಗಡಿ ಬೆಂಗಳೂರು: ಚಂಡೀಗಢ ವಿಮಾನ ನಿಲ್ದಾಣದಲ್ಲಿ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರನೌತ್‌ ಮುಖಕ್ಕೆ ಗುದ್ದಿದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಮಹಿಳಾ ಕಾನ್‌ಸ್ಟೆಬಲ್‌ ಕುಲ್ವಿಂದರ್ ಕೌರ್ ಅವರನ್ನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸಿಐಎಸ್‌ಎಫ್ ಮೂಲಗಳು ತಿಳಿಸಿವೆ. ಆದರೆ, ಅವರ ವಿರುದ್ಧ ಇಲಾಖೆ ವಿಚಾರಣೆ ಪ್ರಗತಿಯಲ್ಲಿದೆ. ಅಂತಿಮ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿಐಎಸ್‌ಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಕರ್ನಾಟಕದಲ್ಲಿರುವ ಸಿಐಎಸ್‌ಎಫ್‌ನ 10ನೇ ಬಟಾಲಿಯನ್‌ಗೆ ಕೌರ್ ಅವರನ್ನು ವರ್ಗಾಯಿಸಲಾಗಿದೆ. 10 ನೇ ಬಟಾಲಿಯನ್, ಬೆಂಗಳೂರು ವಿಮಾನ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳಿಗೆ ಭದ್ರತೆ ಒದಗಿಸುತ್ತದೆ. ನ್ಯಾಯಯುತ ತನಿಖೆ ಹಿನ್ನೆಲೆಯಲ್ಲಿ ಕೌರ್ ಅವರನ್ನು ಚಂಡೀಗಢದಿಂದ ಸ್ಥಳಾಂತರಿಸಲಾಗಿದೆ. ಆದರೆ, ಅವರಿಗೆ 10ನೇ ಬಟಾಲಿಯನ್‌ನಲ್ಲಿ ಯಾವ ಹೊಣೆಗಾರಿಕೆ ಕೊಟ್ಟಿದ್ದಾರೆ ಎಂಬುದುರ ಬಗ್ಗೆ ಮಾಹಿತಿ ಬಹಿರಂಗಪಡಿಸಿಲ್ಲ. ಈಗಾಗಲೇ ಸಿಐಎಸ್‌ಎಫ್ ಸಿಬ್ಬಂದಿಯಾಗಿರುವ ಕೌರ್ ಅವರ ಪತಿ ಚಂಡೀಗಢ ವಿಮಾನ ನಿಲ್ದಾಣದಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಘಟನೆ ನಡೆದ ಮಾರನೇ ದಿನ ಅಮಾನತುಗೊಂಡಿದ್ದ ಕೌರ್ ಅವರ ಬಗ್ಗೆ ಪರ–ವಿರೋಧದ ಚರ್ಚೆಗಳು ನಡೆದಿದ್ದವು. ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಸಂಸದೆಯಾಗಿ ಆಯ್ಕೆಯಾದ ಕಂಗನಾ ಅವರು ಚಂಡೀಗಡದಿಂದ ದೆಹಲಿಗೆ ಎನ್.ಡಿ.ಎ ಸಭೆಗೆ ತೆರಳುತ್ತಿದ್ದರು. ಆಗ ಅವರ ಮೇಲೆ ಕೌರ್ ಹಲ್ಲೆ ಮಾಡಿದ್ದರು. ರೈತರ ಪ್ರತಿಭಟನೆ ಬಗ್ಗೆ ಕಂಗನಾ ಕೀಳಾಗಿ ಮಾತನಾಡಿದ್ದಕ್ಕೆ ಹೊಡೆದಿದ್ದೆ ಎಂದು ಕೌರ್ ಆನಂತರ ಹೇಳಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.