ಪಾಕ್‌ ಮೂಲದ ಐವರಿಗೆ ಸೇರಿದ್ದ ₹ 1 ಕೋಟಿ ಮೌಲ್ಯದ ಆಸ್ತಿ ವಶ ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಚಟುವಟಿಕೆಗೆ ಉತ್ತೇಜನ ನೀಡುತ್ತಿದ್ದ, ಪಾಕ್ ಮೂಲದ ಉಗ್ರರಿಗೆ ಸೇರಿದ್ದ ಸುಮಾರು ₹1 ಕೋಟಿ ಮೌಲ್ಯದ ಆಸ್ತಿಯನ್ನು ಪೊಲೀಸರು ಬಾರಾಮುಲ್ಲಾ ಜಿಲ್ಲೆಯಲ್ಲಿ ಜಪ್ತಿ ಮಾಡಿದ್ದಾರೆ. ಸ್ಥಳೀಯ ಕೋರ್ಟ್‌ನಿಂದ ಜಪ್ತಿ ಆದೇಶ ಪಡೆದ ಪೊಲೀಸರು, ಸುಮಾರು ₹1 ಕೋಟಿ ಮೌಲ್ಯದ 1.125 ಎಕರೆ ವಿಸ್ತೀರ್ಣದ ಆಸ್ತಿ ವಶಕ್ಕೆ ಪಡದರು. ಇದು ಪಾಕ್‌ನಲ್ಲಿ ನೆಲೆಯುಳ್ಳ, ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿದ್ದ ಐವರಿಗೆ ಸೇರಿದ್ದಾಗಿದೆ ಎಂದು ಹೇಳಿಕೆ ತಿಳಿಸಿದೆ. ತನಿಖೆಯ ವೇಳೆ ಈ ಆಸ್ತಿಯು ಪಾಕ್ ಮೂಲದವರಿಗೆ ಸೇರಿದ್ದು ಎಂದು ತಿಳಿದುಬಂದಿತ್ತು. ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿದ್ದ ಐವರನ್ನು ಬಶೀರ್ ಅಹ್ಮದ್ ಗ್ಯಾನಿ, ಮೆಹರಾಜ್‌ ಉದ್ ದಿನ್ ಲೋನ್, ಗುಲಾಂ ಮೊಹಮ್ಮದ್ ಯಾಟೂ, ಅಬ್ದುಲ್‌ ರೆಹಮಾನ್ ಮತ್ತು ಅಬ್ದುಲ್‌ ರಶೀದ್ ಲೋನ್ ಎಂದು ಗುರುತಿಸಲಾಗಿದೆ. ಅಪರಾಧ ದಂಡಸಂಹಿತೆ ವಿಧಿ 83ರ ಅನ್ವಯ, 2008ರಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.