ಶಾಸಕರಲ್ಲಿ ಅಸಮಾಧಾನ: ಜಾರ್ಖಂಡ್ ಸಿಎಂ ಆಗಿ ಮತ್ತೆ ಹೇಮಂತ್ ಸೊರೇನ್? ರಾಂಚಿ: ಮಿತ್ರಪಕ್ಷಗಳ ಶಾಸಕರ ನಡುವೆ ಭಿನ್ನಾಭಿಪ್ರಾಯ ತಲೆದೂರಿರುವುದರಿಂದ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಜೆಎಎಂ ಪಕ್ಷದ ಕಾರ್ಯಕಾರಿ ಅಧ್ಯಕ್ಷ ಹೇಮಂತ್ ಸೊರೇನ್ ಅವರು ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ಬುಧವಾರ ತಿಳಿಸಿವೆ. ಮುಖ್ಯಮಂತ್ರಿ ಚಾಂಪೈ ಸೊರೇನ್ ಅವರ ನಿವಾಸದಲ್ಲಿ ನಡೆದ ಮೈತ್ರಿಕೂಟದ ನಾಯಕರ ಸಭೆಯಲ್ಲಿ, ಹೇಮಂತ್ ಸೊರೇನ್ ಅವರನ್ನು ಜೆಎಎಂನ ಶಾಸಕಾಂಗ ಪಕ್ಷದ ನಾಯಕನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಎಂದು ಮೂಲಗಳಿಂದ ಗೊತ್ತಾಗಿದೆ. ಚಾಂಪೈ ಸೊರೇನ್ ಅವರನ್ನು ಬದಲಾಯಿಸುವ ನಿರ್ಣಯವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು ಎಂದು ಸಭೆಯಲ್ಲಿ ಹಾಜರಿದ್ದ ಮುಖಂಡರೊಬ್ಬರು ಪಿಟಿಐ ಜೊತೆ ಹೇಳಿಕೊಂಡಿದ್ದಾರೆ. ಒಂದು ವೇಳೆ ಸೊರೇನ್ ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾದರೆ, ಈ ಹುದ್ದೆಯನ್ನು ಮೂರನೇ ಬಾರಿಗೆ ಅಲಂಕರಿಸಿದಂತಾಗುತ್ತದೆ. ರಾಜ್ಯದ 13ನೇ ಮುಖ್ಯಮಂತ್ರಿಯಾಗಲಿದ್ದಾರೆ. ಜಾರ್ಖಂಡ್ ಕಾಂಗ್ರೆಸ್‌ನ ಉಸ್ತುವಾರಿ ಗುಲಾಮ್ ಅಹಮದ್ ಮಿರ್‌, ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ರಾಜೇಶ್ ಠಾಕೂರ್, ಹೇಮಂತ್ ಸೊರೇನ್ ಸಹೋದರ ಬಸಂತ್‌ ಹಾಗೂ ಪತ್ನಿ ಕಲ್ಪನಾ ಅವರೂ ಸಭೆಯಲ್ಲಿ ಹಾಜರಿದ್ದರು. ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿದ್ದ ಹೇಮಂತ್ ಸೊರೇನ್ ಅವರು ಐದು ತಿಂಗಳ ಬಳಿಕ ಜೂನ್ 28ರಂದು ಜೈಲಿನಿಂದ ಬಿಡುಗಡೆಯಾಗಿದ್ದರು, ಜನವರಿ 31ರಂದು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.