ಬಿಆರ್‌ಎಸ್‌ನ ಮತ್ತೊಬ್ಬ ಶಾಸಕ ಕಾಂಗ್ರೆಸ್‌ಗೆ ಹೈದರಾಬಾದ್‌: ಬಿಆರ್‌ಎಸ್‌ನ ಮತ್ತೊಬ್ಬ ಶಾಸಕ ಶುಕ್ರವಾರ ತೆಲಂಗಾಣದ ಆಡಳಿತಾರೂಢ ಕಾಂಗ್ರೆಸ್‌ ಪಕ್ಷ ಸೇರಿದ್ದಾರೆ. ‘ಗ್ರೇಟರ್‌ ಹೈದರಾಬಾದ್‌’ ಪ್ರದೇಶದ ಚೇವೆಲ್ಲಾದ ಶಾಸಕ ಕಾಳೆ ಯಾದಯ್ಯ ಅವರು ತೆಲಂಗಾಣದ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಸಮ್ಮುಖದಲ್ಲಿ ದೆಹಲಿಯಲ್ಲಿ ಕಾಂಗ್ರೆಸ್‌ ಸೇರ್ಪಡೆಯಾದರು. ‘ಗ್ರೇಟರ್‌ ಹೈದರಾಬಾದ್‌’ ಪ್ರದೇಶದಿಂದ ಕಾಂಗ್ರೆಸ್‌ ಸೇರಿದ ಎರಡನೇ ಶಾಸಕ ಯಾದಯ್ಯ ಅವರಾಗಿದ್ದಾರೆ. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡ ಬಿಆರ್‌ಎಸ್‌ ಪಕ್ಷವು ಗ್ರೇಟರ್‌ ಹೈದರಾಬಾದ್‌ ಪ್ರದೇಶದಲ್ಲಿನ ಒಟ್ಟು 25 ಕ್ಷೇತ್ರಗಳ ಪೈಕಿ 16 ರಲ್ಲಿ ಜಯಗಳಿಸಿತ್ತು. ಕಳೆದ ವರ್ಷ ತೆಲಂಗಾಣದಲ್ಲಿ ಬಹುಮತ ಪಡೆದ ಕಾಂಗ್ರೆಸ್‌ ಪಕ್ಷ ಅಧಿಕಾರ ರಚಿಸಿತು. ಆ ನಂತರದಿಂದ ಬಿಆರ್‌ಎಸ್‌ನಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದ್ದು, ಒಬ್ಬೊಬ್ಬರೇ ಶಾಸಕರು ಕಾಂಗ್ರೆಸ್‌ ಸೇರಲಾರಂಭಿಸಿದ್ದಾರೆ. ಈ ಹಾದಿಯಲ್ಲಿ ಯಾದಯ್ಯ ಅವರು ಬಿಆರ್‌ಎಸ್‌ನ ಆರನೇ ಶಾಸಕರು. ಇದಕ್ಕೂ ಮುನ್ನ ತಲ್ಲಂ ವೆಂಕಟರಾವ್‌, ಕಡಿಯಂ ಶ್ರೀಹರಿ, ಪೋಚರಂ ಶ್ರೀನಿವಾಸ ರೆಡ್ಡಿ, ಡಾ. ಎಂ. ಸಂಜಯ್‌ ಕುಮಾರ್‌ ಅವರು ಬಿಆರ್‌ಎಸ್‌ ತ್ಯಜಿಸಿ ಕಾಂಗ್ರೆಸ್‌ ಸೇರಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.