ಅಯೋಧ್ಯೆಯಲ್ಲಿ ಧಾರಾಕಾರ ಮಳೆ | ರಾಮಪಥ ಜಲಾವೃತ: 6 ಅಧಿಕಾರಿಗಳ ಅಮಾನತು ಅಯೋಧ್ಯೆ(ಉ.ಪ್ರ): ಅಯೋಧ್ಯೆಯ ನೂತನ ರಾಮಪಥವು ಮಳೆಗೆ ಜಲಾವೃತವಾದ ಕಾರಣ ಕಾಮಗಾರಿಯ ಉಸ್ತುವಾರಿ ವಹಿಸಿದ್ದ 6 ಅಧಿಕಾರಿಗಳನ್ನು ಉತ್ತರಪ್ರದೇಶ ಸರ್ಕಾರ ಅಮಾನತುಗೊಳಿಸಿದೆ. ಜೂನ್ 23 ಮತ್ತು 25ರಂದು ಸುರಿದ ಮಳೆಗೆ ರಾಮಪಥ ಸೇರಿದಂತೆ 15 ರಸ್ತೆಗಳು ಜಲಾವೃತವಾಗಿದ್ದವು. ಈ ರಸ್ತೆಗಳ ಬಳಿ ಇದ್ದ ಮನೆಗಳಿಗೂ ನೀರು ನುಗ್ಗಿತ್ತು. 14 ಕಿಲೋಮೀಟರ್‌ ಉದ್ದದ ರಸ್ತೆಯು 12ಕ್ಕೂ ಹೆಚ್ಚು ಸ್ಥಳಗಳಲ್ಲಿ ಕುಸಿದಿದೆ. ಲೋಕೋಪಯೋಗಿ ಇಲಾಖೆ ಮತ್ತು ಜಲ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್‌, ಸಹಾಯಕ ಎಂಜಿನಿಯರ್‌, ಕಿರಿಯ ಎಂಜಿನಿಯರ್‌ಗಳನ್ನು ಅಮಾನತುಗೊಳಿಸಲಾಗಿದೆ. ಅಹಮದಾಬಾದ್‌ ಮೂಲದ ಗುತ್ತಿಗೆ ಕಂಪನಿ ಭುವನ್‌ ಇನ್ಫ್ರಾಕಾಮ್‌ ಪ್ರೈ. ಲಿಮಿಟೆಡ್‌ಗೂ ರಾಜ್ಯ ಸರ್ಕಾರ ನೋಟಿಸ್‌ ಜಾರಿಗೊಳಿಸಿದೆ. ರಾಮಪಥ ನಿರ್ಮಾಣಗೊಂಡು ಕೆಲವೇ ತಿಂಗಳುಗಳಲ್ಲಿ ಹಲವು ಭಾಗಕ್ಕೆ ಹಾನಿಯಾಗಿದೆ. ಇದು ಕಾಮಗಾರಿಯಲ್ಲಿನ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಇದರಿಂದ ಸರ್ಕಾರದ ಘನತೆಗೆ ದಕ್ಕೆಯಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಆದೇಶದಲ್ಲಿ ತಿಳಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.