ಎನ್‌ಡಿಆರ್‌ಎಫ್‌ ಸಿಬ್ಬಂದಿಗೆ ‘ಅಪಾಯ ಭತ್ಯೆ’: ಗೃಹ ಸಚಿವ ಅಮಿತ್‌ ಶಾ ನವದೆಹಲಿ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ(ಎನ್‌ಡಿಆರ್‌ಎಫ್‌) ಸಿಬ್ಬಂದಿಗೆ ಶೇ 40 ‘ತೊಂದರೆ ಮತ್ತು ಅಪಾಯ ಭತ್ಯೆ’ ನೀಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಶನಿವಾರ ಘೋಷಿಸಿದ್ದಾರೆ. ಈಚೆಗೆ ಹಿಮಾಚಲ ಪ್ರದೇಶದ ಮಣಿರಂಗ್‌ ಶಿಖರವನ್ನು ಯಶಸ್ವಿಯಾಗಿ ಏರಿ ಹಿಂತಿರುಗಿದ್ದ ಎನ್‌ಡಿಆರ್‌ಎಫ್‌ನ 35 ಜನರ ಸಾಹಸ ತಂಡಕ್ಕೆ ಅಭಿನಂದನೆ ಸಲ್ಲಿಸುವ ವೇಳೆ ಅಮಿತ್‌ ಶಾ ಅವರು ಈ ಘೋಷಣೆ ಮಾಡಿದ್ದಾರೆ. ಅಪಾಯ ಭತ್ಯೆಯು ವಿಪತ್ತು ನಿರ್ವಹಣೆಯಂತಹ ಸವಾಲಿನ ಸಂದರ್ಭದಲ್ಲಿ ತಮ್ಮ ಜೀವ ಪಣಕ್ಕಿಟ್ಟು ಜನರ ಜೀವ ರಕ್ಷಿಸುವ ಎನ್‌ಡಿಆರ್‌ಎಫ್‌ ಸಿಬ್ಬಂದಿಯ ಬಹುದಿನಗಳ ಬೇಡಿಕೆಯಾಗಿತ್ತು. ಇದೀಗ ಈ ಸೌಲಭ್ಯದಿಂದ ಎನ್‌ಡಿಆರ್‌ಎಫ್‌ನ ಎಲ್ಲ 16,000 ಸಿಬ್ಬಂದಿಗೆ ಅನುಕೂಲವಾಗಲಿದೆ. ಅಲ್ಲದೆ, ರಾಷ್ಟ್ರೀಯ ಭದ್ರತಾ ಪಡೆ(ಎನ್‌ಎಸ್‌ಜಿ) ಹಾಗೂ ವಿಶೇಷ ಭದ್ರತಾ ಪಡೆಯ(ಎಸ್‌ಪಿಜಿ) ಸಿಬ್ಬಂದಿಗೂ ಶೇ.25 ತೊಂದರೆ ಮತ್ತು ಅಪಾಯ ಭತ್ಯೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿರುವುದಾಗಿ ಅವರು ಹೇಳಿದ್ದಾರೆ. ಇದೇ ವೇಳೆ ಎನ್‌ಡಿಆರ್‌ಎಫ್‌, ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆ(ಸಿಎಪಿಎಫ್‌) ಸೇರಿದಂತೆ ಕೇಂದ್ರ ಸರ್ಕಾರದ ಅಡಿ ಬರುವ ಭದ್ರತಾ ಪಡೆಗಳಲ್ಲಿ ‘ಕ್ರೀಡಾ ಸಂಸ್ಕೃತಿ’ ವೃದ್ಧಿಸಲು ಕ್ರಮ ಕೈಗೊಳ್ಳುವುದಾಗಿಯೂ ಕೇಂದ್ರ ಗೃಹ ಸಚಿವರು ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.