ದಿಗ್ಭ್ರಮೆ ಮೂಡಿಸುವ ಪ್ರಧಾನಿ ಹೇಳಿಕೆ: ಜೈರಾಮ್‌ ರಮೇಶ್‌ ನವದೆಹಲಿ: ಇದೇ ಮೊದಲ ಬಾರಿಗೆ ಮಣಿಪುರದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಸಭೆಯಲ್ಲಿ ಮಾತನಾಡಿರುವ ಕುರಿತು ಕಾಂಗ್ರೆಸ್‌ ಬುಧವಾರ ತೀಕ್ಷ್ಮವಾಗಿ ಪ್ರತಿಕ್ರಿಯಿಸಿದೆ. ‘ತಿಂಗಳುಗಟ್ಟಲೇ ಮೌನ ತಾಳಿದ ನಂತರ ಮನುಷ್ಯಾತೀತರಾದ ಪ್ರಧಾನಿ ರಾಜ್ಯಸಭೆಯಲ್ಲಿ ‘ಮಣಿಪುರ ಸಹಜ ಸ್ಥಿತಿಗೆ ಮರಳಿದೆ’ ಎಂಬ ‘ದಿಗ್ಭ್ರಮೆ ಮೂಡಿಸುವಂಥ ಹೇಳಿಕೆ’ ನೀಡಿದ್ದಾರೆ. ಆದರೆ, ವಾಸ್ತವವಾಗಿ ಮಣಿಪುರದಲ್ಲಿ ಇಂದಿಗೂ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ’ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭೆ ಸದಸ್ಯ ಜೈರಾಮ್‌ ರಮೇಶ್‌ ಹೇಳಿದ್ದಾರೆ. ‘ಮಣಿಪುರದ ಸ್ಥಿತಿಗತಿಗಳ ಕುರಿತು ಜುಲೈ 1ರಂದು ಇನ್ನರ್‌ ಮಣಿಪುರ ಕ್ಷೇತ್ರದ ಸಂಸದ, ಲೋಕಸಭೆಯಲ್ಲಿ ವಿವರಿಸಿದ್ದಾರೆ. ಆದರೆ, ಮೋದಿ ಅವರು ಮಣಿಪುರವು ಸಹಜ ಸ್ಥಿತಿಗೆ ಮರಳಿದೆ ಎನ್ನುತ್ತಿದ್ದಾರೆ. ಮನುಷ್ಯಾತೀತರಾದ ಪ್ರಧಾನಿ ಮಾತ್ರ ಇದುವರೆಗೂ ಮಣಿಪುರಕ್ಕೆ ಭೇಟಿ ನೀಡಿಲ್ಲ. ಅಲ್ಲಿನ ರಾಜಕೀಯ ನಾಯಕರನ್ನೂ ಭೇಟಿ ಮಾಡಿಲ್ಲ. ರಾಷ್ಟ್ರಪತಿ ಅವರ ಭಾಷಣದಲ್ಲಿಯೂ ಮಣಿಪುರದ ಕುರಿತು ಯಾವುದೇ ಪ್ರಸ್ತಾಪ ಇರಲಿಲ್ಲ’ ಎಂದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.