ಮಳೆಯಿಂದ ಹಳಿ ಮೇಲೆ ಬಿದ್ದ ಮರ: ಪ್ರಯಾಣಿಕರಿಲ್ಲದ ರೈಲು ಅಪಘಾತ ಕಾಂಕೇರ್: ಹಳಿ ಮೇಲೆ ಮರ ಬಿದ್ದಿದ್ದರಿಂದ ಪ್ರಯಾಣಿಕರಿಲ್ಲದೇ ಸಂಚರಿಸುತ್ತಿದ್ದ ರೈಲೊಂದು ಹಳಿ ತಪ್ಪಿರುವ ಘಟನೆ ಛತ್ತೀಸಗಢದ ಕಾಂಕೇರ್ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ಘಟನೆಯಲ್ಲಿ ಲೊಕೊ ಪೈಲಟ್ ಗಾಯಗೊಂಡಿದ್ದು ಅವರನ್ನು ಕಾಂಕೇರ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ ಭಾನುಪ್ರತಾಪಪುರ–ಗುದ್ದಾಂ ನಡುವೆ ಸಂಚರಿಸುತ್ತಿದ್ದ ಪ್ರಯಾಣಿಕರಿಲ್ಲದ ಡೆಮು ರೈಲು ದಲಿರಂಜಹಾರ್ ಬಳಿ ಅಪಘಾತಕ್ಕೆ ಈಡಾಗಿದೆ. ಈ ಪ್ರದೇಶದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು ಹಳಿ ಮೇಲೆ ಮರ ಉರುಳಿ ಬಿದ್ದಿತ್ತು. ಮಳೆ ಇದ್ದಿದ್ದರಿಂದ ಲೊಕೊ ಪೈಲಟ್ ಮರ ಬಿದ್ದಿದ್ದನ್ನು ಗಮನಿಸಿರಲಿಲ್ಲ. ಹೀಗಾಗಿ ಹಳಿ ತಪ್ಪಿದೆ ಎಂದು ತಿಳಿಸಿದ್ದಾರೆ. ಡೆಮು ರೈಲಿನ ನಾಲ್ಕಕ್ಕೂ ಹೆಚ್ಚು ಬೋಗಿಗಳು ಹಾನಿಗೊಳಗಾಗಿವೆ ಎಂದು ತಿಳಿಸಿದ್ದಾರೆ. ಸ್ಥಳದಲ್ಲಿ ಬಿದ್ದಿದ್ದ ಮರವನ್ನು ತೆರವುಗೊಳಿಸಲಾಗಿದ್ದು, ಈ ಮಾರ್ಗದಲ್ಲಿ ರೈಲು ಸಂಚಾರ ಪುನರಾರಂಭವಾಗಿದೆ. ರೈಲಿನಲ್ಲಿ ಪ್ರಯಾಣಿಕರು ಇರದಿದ್ದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ ಎಂದು ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.