ತೆಲಂಗಾಣ: ಬಿಆರ್‌ಎಸ್‌ನ 6 ಎಂಎಲ್‌ಸಿಗಳು ಕಾಂಗ್ರೆಸ್ ಸೇರ್ಪಡೆ ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ನೇತೃತ್ವದಲ್ಲಿ ತೆಲಂಗಾಣದ ಬಿಆರ್‌ಎಸ್ ಪಕ್ಷದ 6 ಮಂದಿ ಎಂಎಲ್‌ಸಿಗಳು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಮಾಜಿ ಮುಖ್ಯಮಂತ್ರಿ, ಬಿಆರ್‌ಎಸ್ ವರಿಷ್ಠ ಕೆ. ಚಂದ್ರಶೇಖರ್ ರಾವ್ ಅವರಿಗೆ ಭಾರಿ ಹಿನ್ನಡೆಯಾಗಿದೆ. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಹೀನಾಯ ಸೋಲಿನ ಬಳಿಕ ಬಿಆರ್‌ಎಸ್ ಪಕ್ಷದ ಹಲವು ನಾಯಕರು, ಸಂಸದರು ಮತ್ತು ಶಾಸಕರು ಪಕ್ಷ ತೊರೆದಿದ್ದಾರೆ. ತೆಲಂಗಾಣದ ವಿಧಾನ ಪರಿಷತ್‌ನಲ್ಲಿ ಸದ್ಯ ಬಿಆರ್‌ಎಸ್‌ನ 25, ಕಾಂಗ್ರೆಸ್‌ನ 4 ಸದಸ್ಯರಿದ್ದಾರೆ. 4 ಮಂದಿ ನಾಮನಿರ್ದೇಶಿತ ಸದಸ್ಯರು, ಎಐಎಂಐಎಂನ ಇಬ್ಬರು ಸದಸ್ಯರು, ಬಿಜೆಪಿ, ಪಿಆರ್‌ಟಿಯು ಪಕ್ಷದಿಂದ ತಲಾ ಒಬ್ಬ ಸದಸ್ಯ, ಒಬ್ಬ ಪಕ್ಷೇತರ ಸದಸ್ಯರಿದ್ದಾರೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ದೆಹಲಿ ಪ್ರವಾಸದಿಂದ ಹಿಂದಿರುಗಿದ ಬೆನ್ನಲ್ಲೇ ಈ ಪಕ್ಷದ ಸೇರ್ಪಡೆ ಕಾರ್ಯಕ್ರಮ ನಡೆದಿದೆ. 6 ಎಂಎಲ್‌ಸಿಗಳ ಸೇರ್ಪಡೆ ಬಳಿಕ ತೆಲಂಗಾಣ ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯೆ 10ಕ್ಕೆ ಏರಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.