ಬಿಜೆಪಿ: 5 ಕೇಂದ್ರಾಡಳಿತ ಪ್ರದೇಶ ಹಾಗೂ 18 ರಾಜ್ಯಗಳಿಗೆ ಉಸ್ತುವಾರಿಗಳ ನೇಮಕ ನವದೆಹಲಿ: ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಬಿಜೆಪಿಯು ಶುಕ್ರವಾರ ಪಕ್ಷದ ರಾಜ್ಯ ಉಸ್ತುವಾರಿ ಮತ್ತು ಸಹ ಉಸ್ತುವಾರಿಗಳನ್ನು ನೇಮಕ ಮಾಡಿದೆ. ಈ ಬಗ್ಗೆ ಬಿಜೆಪಿಯು ಅಧಿಕೃತವಾಗಿ ಪ್ರಕಟಣೆ ಹೊರಡಿಸಿದೆ. ಐದು ಕೇಂದ್ರಾಡಳಿತ ಪ್ರದೇಶಗಳು ಹಾಗೂ 18 ರಾಜ್ಯಗಳಿಗೆ ರಾಜ್ಯ ಉಸ್ತುವಾರಿ ಮತ್ತು ಸಹ ಉಸ್ತುವಾರಿಗಳನ್ನು ನೇಮಕ ಮಾಡಿದೆ. ಕೆಲವರನ್ನು ಅದೇ ಸ್ಥಾನದಲ್ಲಿ ಮುಂದುವರಿಸಲಾಗಿದೆ. ಈಶಾನ್ಯ ರಾಜ್ಯಗಳಿಗೆ ಸಂಯೋಜಕನ್ನು ನೇಮಕ ಮಾಡಲಾಗಿದೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ವಿನೋದ್‌ ತಾವ್ಡೆ ಬಿಹಾರಕ್ಕೆ, ತರುಣ್‌ ಛುಗ್‌ ಜಮ್ಮು–ಕಾಶ್ಮೀರದ ಮತ್ತು ದುಶ್ಯಂತ್‌ ಕುಮಾರ್‌ ಗೌತಮ್‌ ಅವರು ಉತ್ತರಾಖಂಡದ ಉಸ್ತುವಾರಿಗಳಾಗಿ ಮುಂದುವರಿಯಲಿದ್ದಾರೆ. ಪ್ರಕಾಶ್‌ ಜಾವಡೇಕರ್‌ ಅವರನ್ನು ಕೇರಳದ ಮತ್ತು ಸತೀಶ್‌ ಪೂನಿಯ ಅವರನ್ನು ಹರಿಯಾಣದ ಉಸ್ತುವಾರಿಗಳಾಗಿ ನೇಮಿಸಲಾಗಿದೆ. ಬಿಹಾರದ ಶಾಸಕ ನಿತೀನ್‌ ನಬಿನ್‌ ಛತ್ತೀಸಗಢಕ್ಕೆ, ಆಶೀಸ್‌ ಸೋದ್‌ ಗೋವಾಕ್ಕೆ , ಶ್ರೀಕಾಂತ್‌ ಶರ್ಮ ಹಿಮಾಚಲ ಪ್ರದೇಶಕ್ಕೆ, ಲಕ್ಷ್ಮಿಕಾಂತ್‌ ಬಜ್‌ಪೈ ಜಾರ್ಖಂಡ್‌ಗೆ, ಮಹೇಂದ್ರ ಸಿಂಗ್‌ ಮಧ್ಯಪ್ರದೇಶಕ್ಕೆ, ವಿಜಯ್‌ಪಾಲ್‌ ಸಿಂಗ್‌ ತೋಮರ್‌ ಒಡಿಶಾಕ್ಕೆ ಉಸ್ತುವಾರಿಗಳಾಗಿ ನೇಮಕವಾಗಿದ್ದಾರೆ. ಗುಜರಾತ್‌ ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾನಿ ಅವರು ಪಂಜಾಬ್‌ ಮತ್ತು ಸಂಸದ ಸಂಬಿತ್‌ ಪಾತ್ರಾ ಅವರು ಈಶಾನ್ಯ ರಾಜ್ಯಗಳ ಸಂಯೋಜಕರಾಗಿ ಮುಂದುವರಿಯಲಿದ್ದಾರೆ. ಕರ್ನಾಟಕ ರಾಜ್ಯಕ್ಕೆ ರಾಧಾ ಮೋಹನ್‌ ದಾಸ್‌ ಅವರನ್ನು ಉಸ್ತುವಾರಿಯಾಗಿ, ಸುಧಾಕರ್‌ ರೆಡ್ಡಿ ಅವರನ್ನು ಸಹ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ. - - ../p9gRmBmoJy ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.