ಸಿಕ್ಕಿಂ ಮಾಜಿ ಸಚಿವ ನಾಪತ್ತೆ: ವಿಶೇಷ ತನಿಖಾ ತಂಡ ರಚಿಸಿದ ಪೊಲೀಸ್ ಗ್ಯಾಂಗ್ಟಕ್: ಸಿಕ್ಕಿಂನ ಮಾಜಿ ಸಚಿವ 80 ವರ್ಷದ ರಾಮಚಂದ್ರ ಪೌಡ್ಯಾಲ್ ಅವರು ಜುಲೈ 7ರಿಂದ ನಾಪತ್ತೆಯಾಗಿದ್ದು, ಇವರನ್ನು ಹುಡುಕಲು ವಿಶೇಷ ತನಿಖಾ ತಂಡವನ್ನು () ಪೊಲೀಸ್ ಇಲಾಖೆ ರಚಿಸಿದೆ. ಭಾನುವಾರ ಬೆಳಿಗ್ಗೆ ಮನೆಯಿಂದ ಹೊರಟ ಪೌಡ್ಯಾಲ್ ಅವರು ಮಧ್ಯಾಹ್ನ ಮರಳುವುದಾಗಿ ಮನೆಯಲ್ಲಿ ತಿಳಿಸಿದ್ದರು. ಆದರೆ ಅವರು ಬಾರದ ಕಾರಣ ಕುಟುಂಬಸ್ಥರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ‘ಪಾಕ್ಯಾಂಗ್ ಜಿಲ್ಲೆಯ ಚೋಟಾ ಸಿಂಗ್ಟಮ್‌ನ ನಿವಾಸಿಯಾದ ರಾಮಚಂದ್ರ ಅವರನ್ನು ಪತ್ತೆ ಮಾಡಲು ವಿಶೇಷ ತನಿಖಾ ತಂಡ ರಚಿಸಲಾಗಿದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಕರ್ಮಾ ಗ್ಯಾಮ್ಟ್ಸೊ ಭುಟಿಯಾ ಅವರು ತಿಳಿಸಿದ್ದಾರೆ. ‘ಪಕ್ಕದ ಪಶ್ಚಿಮ ಬಂಗಾಳದ ಸಿಲಿಗುರಿಗೂ ಪೊಲೀಸರನ್ನು ಕಳುಹಿಸಲಾಗಿದೆ. ರಾಮಚಂದ್ರ ಅವರ ಸಂಬಂಧಿಕರನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಲಾಗುತ್ತಿದೆ. ಆದರೆ ಅವರ ಬಗ್ಗೆ ಯಾವುದೇ ಮಾಹಿತಿ ಈವರೆಗೂ ಲಭ್ಯವಾಗಿಲ್ಲ’ ಎಂದಿದ್ದಾರೆ. ರಾಮಚಂದ್ರ ಅವರು ಉಪ ಸಭಾಪತಿಯಾಗಿ ಹಾಗೂ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಸಿಕ್ಕಿಂ ಕಾಂಗ್ರೆಸ್‌ (ಕ್ರಾಂತಿಕಾರಿ) ಹಾಗೂ ರೈಸಿಂಗ್ ಸನ್‌ ಪಕ್ಷಗಳಲ್ಲಿ ದುಡಿದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.