ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣ: ಸಂಜಯ್‌ ಸಿಂಗ್‌ಗೆ ಜಾಮೀನು ಸುಲ್ತಾನ್‌ಪುರ, ಉತ್ತರ ಪ್ರದೇಶ: 2021ರಲ್ಲಿ ಕೋವಿಡ್‌ ನಿಯಮಗಳನ್ನು ಉಲ್ಲಂಘಿಸಿದ್ದ ಪ್ರಕರಣದಲ್ಲಿ ಎಎಪಿ ರಾಜ್ಯಸಭೆ ಸಂಸದ ಸಂಜಯ್‌ ಸಿಂಗ್‌ ಅವರಿಗೆ ಇಲ್ಲಿಯ ಜನಪ್ರತಿನಿಧಿ ನ್ಯಾಯಾಲಯವು ಗುರುವಾರ ಜಾಮೀನು ಮಂಜೂರು ಮಾಡಿತು. ಜಿಲ್ಲಾ ಪಂಚಾಯತ್‌ ಚುನಾವಣೆ ವೇಳೆ ಹಸನ್‌ಪುರ ಗ್ರಾಮದ ಎಎಪಿ ಅಭ್ಯರ್ಥಿ ಸಲ್ಮಾ ಬೇಗಂ ಪರ ಪ್ರಚಾರ ನಡೆಸಿದ್ದ ಸಂಜಯ್‌ ಅವರು, ಕೋವಿಡ್‌ ನಿಯಮಗಳನ್ನು ಉಲ್ಲಂಘಿಸಿ ಸಭೆ ಆಯೋಜಿಸಿದ್ದರು ಎಂದು ಆರೋಪಿಸಿ 2021ರ ಏಪ್ರಿಲ್‌ನಲ್ಲಿ ಎಫ್‌ಐಆರ್‌ ದಾಖಲಿಸಲಾಗಿತ್ತು. ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಹಲವಾರು ಬಾರಿ ಸಮನ್ಸ್‌ ನೀಡಿದ್ದರೂ ಅವರು ಹಾಜರಾಗಿರಲಿಲ್ಲ. ಆ ಬಳಿಕ, ಅವರ ವಿರುದ್ಧ ಜಾಮೀನು ರಹಿತ ವಾರಂಟ್‌ ಜಾರಿ ಮಾಡಲಾಗಿತ್ತು. ಗುರುವಾರ ನ್ಯಾಯಾಲಯಕ್ಕೆ ಹಾಜರಾಗಿದ್ದ ಸಂಜಯ್‌ ಅವರಿಂದ ₹20 ಸಾವಿರ ಬಾಂಡ್‌ ಇರಿಸಿಕೊಂಡು ವಿಶೇಷ ಮ್ಯಾಜಿಸ್ಟ್ರೇಟ್‌ ಶುಭಂ ವರ್ಮ ಅವರು ಜಾಮೀನು ಮಂಜೂರು ಮಾಡಿದರು ಎಂದು ಅವರ ಪರ ವಕೀಲರು ತಿಳಿಸಿದರು. ಸಂಜಯ್‌ ಸಿಂಗ್‌ ಜೊತೆ ಸಭೆಯಲ್ಲಿ ಭಾಗಿಯಾಗಿದ್ದ ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಅವರೆಲ್ಲರೂ ನ್ಯಾಯಾಲಯಕ್ಕೆ ಬಂದು ವಿಚಾರಣೆ ಎದುರಿಸಿ ಜಾಮೀನು ಪಡೆದಿದ್ದರು ಎಂದು ವಿಶೇಷ ಸರ್ಕಾರಿ ವೈಭವ್‌ ಪಾಂಡೆ ತಿಳಿಸಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 15ಕ್ಕೆ ನಿಗದಿಪಡಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.