ಕೇರಳ | ಕೃಷಿ ಹೊಂಡ ಅಗೆಯುವ ವೇಳೆ ಮಹಿಳೆಯರಿಗೆ ಭಾರಿ ಮೌಲ್ಯದ ನಿಧಿ ಪತ್ತೆ ಕಣ್ಣೂರು: ಮಳೆ ನೀರು ಕೊಯ್ಲು ಹೊಂಡವನ್ನು ಅಗೆಯುತ್ತಿರುವಾಗ ಅಲ್ಲಿದ್ದ ಮಹಿಳಾ ಕಾರ್ಮಿಕರಿಗೆ ಆಶ್ಚರ್ಯದ ರೀತಿಯಲ್ಲಿ ನಿಧಿ ಸಿಕ್ಕಿರುವ ಘಟನೆ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ನಡೆದಿದೆ. ಹೊಂಡವನ್ನು ಅಗೆಯುತ್ತಿರುವಾಗ ಹೊಳೆಯುತ್ತಿರುವ ವಸ್ತು ಕಂಡು ಮೊದಲು ಬಾಂಬ್‌ ಎಂದು ಭಯಪಟ್ಟು ದೂರ ಸರಿದರು. ಆದರೆ ಕೆಲ ಸಮಯದ ನಂತರ ಮಾಟಮಂತ್ರದ ವಸ್ತುಗಳು ಎಂದು ಭಾವಿಸಿದ್ದರು. ಆದರೆ ಬಂಗಾರ, ವಜ್ರ, ಚಿನ್ನದ ನಾಣ್ಯಗಳು ಸೇರಿದಂತೆ ಆಭರಣಗಳ ನಿಧಿ ಪತ್ತೆಯಾಯಿತು ಎಂದು ಮಹಿಳೆಯೊಬ್ಬರು ಘಟನೆ ಬಗ್ಗೆ ವಿವರಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ, ನಿಧಿ ಪತ್ತೆಯಾಗಿರುವ ಬಗ್ಗೆ ಪುರಾತತ್ವ ಇಲಾಖೆಗೆ ತಿಳಿಸಲಾಗಿದೆ. ಈ ಸ್ಥಳದಲ್ಲಿ ಹೆಚ್ಚಿನ ಉತ್ಖನನ ನಡೆಸುವುದು ಇಲಾಖೆಗೆ ಸಂಬಂಧಿಸಿದ ವಿಷಯ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೃಷಿ ಹೊಂಡ ಅಗೆಯುವ ವೇಳೆ ಚಿನ್ನಾಭರಣ, ನಾಣ್ಯಗಳು ಪತ್ತೆ ಪಿಟಿಐ ಕೃಷಿ ಹೊಂಡ ಅಗೆಯುವ ವೇಳೆ ಚಿನ್ನಾಭರಣ, ನಾಣ್ಯಗಳು ಪತ್ತೆ ಪಿಟಿಐ ‘ನಾವು ಈಗಾಗಲೇ ಪತ್ತೆಯಾಗಿರುವ ಆಭರಣ, ನಾಣ್ಯ ಸೇರಿದ ನಿಧಿಯನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಇಂದು (ಶನಿವಾರ) ಸಹ ನಿಧಿ ಪತ್ತೆಯಾದ ಸ್ಥಳದ ಹತ್ತಿರ ಮೂರು ಬೆಳ್ಳಿ ಹಾಗೂ ಚಿನ್ನದ ನಾಣ್ಯ ಪತ್ತೆಯಾಗಿದೆ‘ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.