ಯೋಧನ ಹತ್ಯೆ | ಮೋದಿ, ಮಣಿಪುರ ಸರ್ಕಾರ ನಿದ್ದೆಯಿಂದ ಎಚ್ಚರಗೊಳ್ಳಲಿ: ಪ್ರಿಯಾಂಕಾ ಇಂಫಾಲ್: ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಶಂಕಿತ ಬಂಡುಕೋರರು ನಡೆಸಿದ ಗುಂಡಿನ ದಾಳಿಯಲ್ಲಿ ಸಿಆರ್‌ಪಿಎಫ್‌ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಪ್ರಧಾನಿ ನರೇಂದ್ರ ಮೋದಿ ಮತ್ತು ಮಣಿಪುರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಮಣಿಪುರದಲ್ಲಿ ಸಿಆರ್‌ಪಿಎಫ್ ಬೆಂಗಾವಲು ಪಡೆ ಮೇಲೆ ನಡೆದ ದಾಳಿಯಲ್ಲಿ ಯೋಧರೊಬ್ಬರು ಹುತಾತ್ಮರಾಗಿರುವ ಸುದ್ದಿ ಅತ್ಯಂತ ದುಃಖಕರವಾಗಿದೆ. ದೇವರು ಅಗಲಿದ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು’ ಎಂದು ಪ್ರಿಯಾಂಕಾ ‘ಎಕ್ಸ್‌’ನಲ್ಲಿ (ಟ್ವಿಟರ್‌) ಪೋಸ್ಟ್ ಮಾಡಿದ್ದಾರೆ. ‘ಮಣಿಪುರದಲ್ಲಿ ಎಷ್ಟರಮಟ್ಟಿಗೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕೆ ಯೋಧನ ಹತ್ಯೆಯೇ ಸಾಕ್ಷಿ. ಕಳೆದ ಮೇ 3ರಂದು ಆರಂಭವಾದ ಹಿಂಸಾಚಾರ ಇಂದಿಗೂ ಮುಂದುವರೆದಿದೆ. ಹಿಂಸಾಚಾರದಿಂದಾಗಿ ಇಡೀ ರಾಜ್ಯವೇ ಛಿದ್ರಗೊಂಡಿದೆ. ಇಷ್ಟಾದರೂ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಮಣಿಪುರ ಸರ್ಕಾರ ನಿದ್ದೆಯಿಂದ ಎಚ್ಚರಗೊಳ್ಳುವುದು ಯಾವಾಗ’ ಎಂದು ಆಕ್ರೋಶ ಹೊರಹಾಕಿದ್ದಾರೆ. मणिपुर में के काफिले पर हुए हमले में एक जवान के शहीद होने का समाचार अत्यंत दुखद है। ईश्वर दिवंगत आत्मा को शांति प्रदान करें। शोक-संतप्त परिवार के प्रति गहरी संवेदनाएं। तीन घायल जवानों के शीघ्र स्वस्थ होने की कामना करती हूं। पिछले साल 3 मई को शुरू हुई हिंसा आज तक जारी है।… ಭಾನುವಾರ ಮುಂಜಾನೆ ಶಂಕಿತ ಬಂಡುಕೋರರು ನಡೆಸಿದ ಗುಂಡಿನ ದಾಳಿಯಲ್ಲಿ ಬಿಹಾರ ಮೂಲದ ಯೋಧ ಅಜಯ್‌ ಕುಮಾರ್‌ ಮಿಶ್ರಾ (43) ಮೃತಪಟ್ಟಿದ್ದಾರೆ. ‘ಶನಿವಾರ ರಾತ್ರಿಯಿಂದ ಗುಂಡಿನ ಚಕಮಕಿ ಆರಂಭವಾಗಿತ್ತು. ದಾಳಿಯಿಂದಾಗಿ ಭದ್ರತಾ ಸಿಬ್ಬಂದಿ ಇದ್ದ ವಾಹನಕ್ಕೂ ಹಾನಿಯಾಗಿದೆ. ಮಾಂಗ್‌ಬಂಗ್‌ ಸೇರಿದಂತೆ ಪರ್ವತ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’ ಎಂದು ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.