ಬಜೆಟ್‌ನಲ್ಲಿ ಜಾರ್ಖಂಡ್ ಕಡೆಗಣನೆ: ಕೇಂದ್ರದ ವಿರುದ್ಧ ಹೇಮಂತ್‌ ಸೊರೇನ್‌ ಕಿಡಿ ರಾಂಚಿ: ಈ ಬಾರಿಯ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಜಾರ್ಖಂಡ್‌ ರಾಜ್ಯವನ್ನು ನಿರ್ಲಕ್ಷಿಸಿದ್ದು, ಇದನ್ನು ಅರಿತರೂ ಬಿಜೆಪಿ ನಾಯಕರು ಮೌನವಾಗಿದ್ದಾರೆ ಎಂದು ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಆರೋಪಿಸಿದ್ದಾರೆ. ‘ರಾಜ್ಯಕ್ಕೆ ಕೇಂದ್ರ ಮಾಡಿರುವ ತಾರತಮ್ಯಕ್ಕೆ ಹೊಣೆ ಯಾರು? ಕೇಂದ್ರವು ರಾಜ್ಯಕ್ಕೆ ನೀಡಬೇಕಾದ ₹1.36 ಲಕ್ಷ ಕೋಟಿ ಹಣ ಬಾಕಿ ಉಳಿಸಿಕೊಂಡಿದೆ, ಆದರೆ ಬಿಜೆಪಿ ನಾಯಕರು ಈ ವಿಷಯದಲ್ಲಿ ಮೌನವಾಗಿದ್ದಾರೆ’ ಎಂದಿದ್ದಾರೆ. ಎನ್‌ಡಿಎ ಸರ್ಕಾರ ರಚನೆಗೆ ಸಹಾಯ ಮಾಡಿದ ಆಂಧ್ರಪ್ರದೇಶ ಮತ್ತು ಬಿಹಾರಕ್ಕೆ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್‌ ಅವರು ವಿಶೇಷ ಒತ್ತು ನೀಡಿದ್ದರ ಕುರಿತು ವ್ಯಂಗ್ಯವಾಡಿದ ಸೊರೇನ್‌, ‘ನಿಮ್ಮ ಊರುಗೋಲುಗಳಿಗೆ ವಿಶೇಷ ಪ್ಯಾಕೇಜ್ ನೀಡಿದ್ದೀರಿ. ಕೊನೆ ಪಕ್ಷ ನಮ್ಮ ಬಾಕಿಯನ್ನು ನಮಗೆ ಪಾವತಿಸಿ’ ಎಂದಿದ್ದಾರೆ. 2014 ಮತ್ತು 2019ರಲ್ಲಿ ಎನ್‌ಡಿಎಗೆ ಜಾರ್ಖಂಡ್‌ನಿಂದ 14 ಸಂಸದರ ಪೈಕಿ 12 ಸಂಸದರನ್ನು ನೀಡಿ ಈ ಬಾರಿ 9 ‌ಸಂಸದರನ್ನು ಹೊಂದಿದ್ದರೂ ನಮ್ಮನ್ನು ಏಕೆ ನಿರ್ಲಕ್ಷಿಸಲಾಗುತ್ತಿದೆ? ಎಂದು ಅಸಮಾಧಾನ ಹೊರಹಾಕಿದ್ದಾರೆ. ಬಜೆಟ್‌ ಬಗ್ಗೆ ಮಂಗಳವಾರ ಪ್ರತಿಕ್ರಿಯಿಸಿದ್ದ ಸೊರೇನ್‌, ‘ಕೇಂದ್ರದ ಬಜೆಟ್‌ನ ಕೃಷಿ ವೆಚ್ಚದಲ್ಲಿ ಕೋಟ್ಯಧಿಪತಿ ಸ್ನೇಹಿತರಿಗೆ ಸಹಾಯ ಮಾಡಿ, ರೈತರನ್ನು ಲೋಟಿ ಮಾಡಲಾಗಿದೆ. ದೇಶದಲ್ಲಿ ಶೇ 90 ರಷ್ಟು ಜನಸಂಖ್ಯೆ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದಕ್ಕಾಗಿ ಈ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ’ ಎಂದು ವಾಗ್ದಾಳಿ ನಡೆಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.