ಗಾಳಿಯಲ್ಲಿ ಗುಂಡು ಹಾರಿಸಿ ಬ್ಯಾಂಕ್‌ನಿಂದ ₹6.5 ಲಕ್ಷ ದೋಚಿದ ದರೋಡೆಕೋರ ಇಂದೋರ್: ರಾಷ್ಟ್ರೀಕೃತ ಬ್ಯಾಂಕ್‌ವೊಂದಕ್ಕೆ ನುಗ್ಗಿದ ಮುಸುಕುಧಾರಿ ದರೋಡೆಕೋರನೊಬ್ಬ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಬೆದರಿಕೆಯೊಡ್ಡಿ ಸುಮಾರು ₹6.5 ಲಕ್ಷ ಹಣವನ್ನು ದೋಚಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಲ್ಲಿನ ವಿಜಯ್‌ನಗರದ ಬ್ಯಾಂಕ್‌ವೊಂದಕ್ಕೆ ನುಗ್ಗಿದ ದರೋಡೆಕೋರ, ಗಾಳಿಯಲ್ಲಿ ಗುಂಡು ಹಾರಿಸಿ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾನೆ. ಸಿಸಿಟಿವಿಯನ್ನು ಪರಿಶೀಲಿಸಿದಾಗ ದರೋಡೆಕೋರ ರೈನ್‌ಕೋಟ್‌ ಧರಿಸಿ ಬಂದಿರುವುದು ತಿಳಿದು ಬಂದಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಅಮಿತ್ ಸಿಂಗ್ ಹೇಳಿದ್ದಾರೆ. ಆರೋಪಿ ಗುರುತು ಪತ್ತೆಯಾಗಿದ್ದು, ಶೀಘ್ರವೇ ಆತನನ್ನು ಬಂಧಿಸಲಾಗುವುದು. ಘಟನೆ ನಡೆಯುವಾಗ ಬ್ಯಾಂಕ್‌ನಲ್ಲಿ ಭದ್ರತಾ ಸಿಬ್ಬಂದಿ ಇರಲಿಲ್ಲ ಎಂಬುವುದು ತಿಳಿದು ಬಂದಿದೆ ಎಂದು ಸಿಂಗ್ ಮಾಹಿತಿ ನೀಡಿದ್ದಾರೆ. ಮೇಲ್ನೋಟಕ್ಕೆ ಭದ್ರತಾ ಸಿಬ್ಬಂದಿ ಅಥವಾ ಮಾಜಿ ಸೈನಿಕರು ಈ ಕೃತ್ಯವನ್ನು ಎಸೆಗಿರಬಹುದು. ಏಕೆಂದರೆ ಘಟನಾ ಸ್ಥಳದಲ್ಲಿ ಬಿದ್ದಿದ್ದ ಖಾಲಿ ಗುಂಡುಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಸಿಂಗ್ ತಿಳಿಸಿದ್ದಾರೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.