| ನೀರಿನ ಮಟ್ಟ ಇಳಿಕೆ, ಪ್ರವಾಹ ಪರಿಸ್ಥಿತಿ ಸುಧಾರಣೆ ಗುವಾಹಟಿ: ಅಸ್ಸಾಂನಲ್ಲಿ ನೀರಿನ ಮಟ್ಟ ವೇಗವಾಗಿ ಇಳಿಕೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಗುವಾಹಟಿಯಲ್ಲಿರುವ ಭಾರತೀಯ ಹವಾಮಾನ ಇಲಾಖೆಯ ಪ್ರಾದೇಶಿಕ ಹವಾಮಾನ ಕೇಂದ್ರವು (ಆರ್‌ಎಂಸಿ) ಕೆಲವು ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆಯನ್ನಷ್ಟೇ ನೀಡಿದೆ. ಶನಿವಾರ ರಾತ್ರಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂ‌ಎ) ತಿಳಿಸಿದೆ. ಇದರೊಂದಿಗೆ ಪ್ರವಾಹ, ಭೂಕುಸಿತ, ಬಿರುಗಾಳಿ ಸೇರಿದಂತೆ ಮಳೆ ಸಂಬಂಧಿತ ಅವಘಡಗಳಲ್ಲಿ ಮೃತರ ಸಂಖ್ಯೆ 107ಕ್ಕೆ ಏರಿಕೆಯಾಗಿದೆ. 8.4 ಲಕ್ಷಕ್ಕೂ ಅಧಿಕ ಜನರು ಈಗಲೂ ಪ್ರವಾಹದಿಂದ ಬಾಧಿತರಾಗಿದ್ದಾರೆ. ಕಾಚಾರ್ ಜಿಲ್ಲೆಯಲ್ಲಿ ಅತಿ ಹೆಚ್ಚು 1.5 ಲಕ್ಷ ಜನರು ಸಂಕಷ್ಟು ಎದುರಿಸುತ್ತಿದ್ದಾರೆ. ಧುಬ್ರಿಯಲ್ಲಿ 1.27 ಲಕ್ಷ ಹಾಗೂ ನಾಗಾಂವ್‌ನಲ್ಲಿ 88,500 ಮಂದಿ ತೊಂದರೆಗೀಡಾಗಿದ್ದಾರೆ. 13 ಜಿಲ್ಲೆಗಳಲ್ಲಿ 221 ಪರಿಹಾರ ಶಿಬಿರಗಳು ಕಾರ್ಯಾಚರಿಸುತ್ತಿದ್ದು, 72,046 ಜನರಿಗೆ ಆಶ್ರಯ ನೀಡಲಾಗಿದೆ. ಪ್ರಸ್ತುತ ರಾಜ್ಯದಲ್ಲಿ 1,705 ಗ್ರಾಮಗಳು ಜಲಾವೃತಗೊಂಡಿದ್ದು, 39,898.92 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಎಎಸ್‌ಡಿಎಂ‌ಎ ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.