ಜಾಮಿಯಾ ಹಿಂಸಾಚಾರ: ವಿಚಾರಣೆಯಿಂದ ಹಿಂದೆ ಸರಿದ ನ್ಯಾ. ಅಮಿತ್ ಶರ್ಮ ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ 2019ರ ಡಿಸೆಂಬರ್‌ನಲ್ಲಿ ನಡೆದ ಪ್ರತಿಭಟನೆ ನಂತರ ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ಹಿಂಸಾಚಾರ ಭುಗಿಲೆದ್ದ ವಿಚಾರಕ್ಕೆ ಸಂಬಂಧಿಸಿ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ಅಮಿತ್ ಶರ್ಮ ಮಂಗಳವಾರ ನಿರಾಕರಿಸಿದ್ದಾರೆ. ನ್ಯಾಯಮೂರ್ತಿ ಪ್ರತಿಭಾ ಎಂ.ಸಿಂಗ್‌ ಅವರ ನೇತೃತ್ವದ ವಿಭಾಗೀಯದ ಪೀಠದ ಎದುರು ಈ ಅರ್ಜಿಗಳ ವಿಚಾರಣೆ ನಡೆಸಲು ಪಟ್ಟಿ ಮಾಡಲಾಗಿತ್ತು. ನ್ಯಾ. ಸಿಂಗ್‌ ಅವರು, ‘ಮತ್ತೊಂದು ಪೀಠವು ಅರ್ಜಿಗಳ ವಿಚಾರಣೆ ನಡೆಸಲಿದೆ. ಆ.8ರಂದು ನಡೆಯುವ ವಿಚಾರಣೆಯಲ್ಲಿ ಅಮಿತ್‌ ಶರ್ಮ ಅವರು ಪೀಠದ ಸದಸ್ಯರಾಗಿರುವುದಿಲ್ಲ’ ಎಂದು ಹೇಳಿದರು. ಹಿಂಸಾಚಾರದ ನಂತರ, ಆಯೋಗದಿಂದ ತನಿಖೆ ಆಗಬೇಕು ಅಥವಾ ವಿಶೇಷ ತನಿಖಾ ತಂಡವನ್ನೋ ಸತ್ಯಶೋಧನಾ ಸಮಿತಿಯನ್ನೋ ರಚಿಸುವಂತೆ ನಿರ್ದೇಶನ ನೀಡಲು ಕೋರಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ವಕೀಲರು, ಜೆಎಂಐ ವಿದ್ಯಾರ್ಥಿಗಳು, ಓಖಲಾ ನಿವಾಸಿಗಳು ಅರ್ಜಿದಾರರಾಗಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.