ಕೇರಳ, ಮುಂಬೈನಲ್ಲಿ ಭಾರಿ ಮಳೆ: ಕೆಲವೆಡೆ ಶಾಲಾ, ಕಾಲೇಜುಗಳಿಗೆ ರಜೆ ತಿರುವನಂತಪುರಂ: ಕೇರಳದ ಹಲವೆಡೆ ಬಿರುಗಾಳಿ ಸಹಿತ ನಿರಂತರ ಮಳೆ ಸುರಿಯುತ್ತಿದ್ದು, ಸೋಮವಾರ ಏಳು ಜಿಲ್ಲೆಯಲ್ಲಿ ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಲಾಯಿತು. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಉತ್ತರ ಮಲಪ್ಪುರಂ, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಿದ್ದು, ಉತ್ತರ ಜಿಲ್ಲೆಗಳಿಗೆ ರೆಡ್ ಅಲರ್ಟ್‌ ಘೋಷಿಸಿದೆ. ಐಎಂಡಿಯು ಎರ್ನಾಕುಲಂ, ತ್ರಿಶ್ಯೂರ್, ಪಾಲಕ್ಕಾಡ್, ಇಡುಕ್ಕಿ, ಕೋಯಿಕ್ಕೋಡ್ ಮತ್ತು ವಯನಾಡ್ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದ್ದಾರೆ. ನಿರಂತರವಾಗಿ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ತ್ರಿಶೂರ್, ಮಲಪ್ಪುರಂ, ಕೋಯಿಕ್ಕೋಡ್, ಕಣ್ಣೂರು, ಕಾಸರಗೋಡು, ಎರ್ನಾಕುಲಂ ಮತ್ತು ವಯನಾಡ್‌ನ ಜಿಲ್ಲಾಧಿ ಕಾರಿಗಳು ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ಮಳೆಯಿಂದಾಗಿ ವಿವಿಧ ಅಣೆಕಟ್ಟು ಗಳ ಗೇಟ್‌ ತೆರೆಯಲಾಗಿದ್ದು, ಪತ್ತನಂತಿಟ್ಟದಲ್ಲಿ ಜಿಲ್ಲಾಡಳಿತವು ಮೂಳಿಯಾರ್ ಅಣೆಕಟ್ಟಿನ ಜಲಾನಯನ ಪ್ರದೇಶದಲ್ಲಿ ವಾಸಿಸುವ ಜನರಿಗೆ ಎಚ್ಚರಿಕೆ ನೀಡಿದೆ. ಮಳೆಯಿಂದಾಗಿ ಪ್ರಮುಖ ರಸ್ತೆಗಳಲ್ಲಿ ನೀರು ನಿಲ್ಲುವುದು, ಸಂಚಾರ ದಟ್ಟಣೆ ಮತ್ತು ವಿದ್ಯುತ್ ಕಂಬಗಳಿಗೆ ಹಾನಿಯಾಗಬಹುದು ಎಂದು ಕೇರಳ ವಿಪತ್ತು ನಿರ್ವಹಣಾ ಪ್ರಾಧಿಕಾರ ಎಚ್ಚರಿಸಿದೆ. ಮನೆಗಳಿಗೆ ಹಾನಿ: ಕೊಟ್ಟಾಯಂ ಜಿಲ್ಲೆಯಲ್ಲಿ ಮುಂಜಾನೆಯಿಂದ ಸುರಿದ ಭಾರಿ ಮಳೆ ಮತ್ತು ಬಿರುಗಾಳಿಯಿಂದ ಮರಗಳು ಬಿದ್ದಿದ್ದು, ಮನೆಗಳು ಮತ್ತು ವಾಹನಗಳಿಗೆ ಹಾನಿಯಾಗಿದೆ. ಒಂಚಿಯಂ, ಕೊಟ್ಟೂರು, ಪಯ್ಯೋಳಿ ಸೇರಿದಂತೆ ಉತ್ತರ ಕೋಯಿಕ್ಕೋಡ್‌ನ ಗ್ರಾಮಾಂತರ ಪ್ರದೇಶಗಳಲ್ಲಿ ಹಲವಾರು ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಭೂಕುಸಿತ: ಕೊಂಕಣ ರೈಲು ಸಂಚಾರ ಸ್ಥಗಿತ ಮಹಾರಾಷ್ಟ್ರದ ಕರಾವಳಿ ಭಾಗದಲ್ಲಿ ಭಾರಿ ಮಳೆಯಿಂದಾಗಿ ರಾಯಗಡ ಮತ್ತು ರತ್ನಗಿರಿ ಜಿಲ್ಲೆಗಳಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, ಕೊಂಕಣ ರೈಲ್ವೆಯ ರೈಲು ಸೇವೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಭಾನುವಾರ ಸಂಜೆ ದಿಬಾಣಖಾವಟಿ-ವಿನ್ಹೆರೆ ಭಾಗದಲ್ಲಿ ಭೂ ಕುಸಿತವಾಗಿದೆ.ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್‌ನ (ಕೆಆರ್‌ಸಿಎಲ್) ಉನ್ನತ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದು, ದುರಸ್ತಿ ಕಾರ್ಯ ಮಾಡುತ್ತಿದ್ದಾರೆ. ಮಂಗಳವಾರದ ವೇಳೆಗೆ ರೈಲು ಸೇವೆಗಳು ಪುನರಾರಂಭವಾಗಲಿರುವ ನಿರೀಕ್ಷೆ ಇದೆ. ದೆಹಲಿಯಲ್ಲಿ ಮಳೆ: ಸಂಚಾರ ಅಸ್ತವ್ಯಸ್ತ ದೆಹಲಿಯ ಕೆಲವು ಭಾಗಗಳು ಮಳೆಯಿಂದಾಗಿ ಜಲಾವೃತಗೊಂಡಿದ್ದು, ಸೋಮವಾರ ಬೆಳಿಗ್ಗೆ ರಸ್ತೆಯಲ್ಲಿ ಸಂಚರಿಸಲು ಪ್ರಯಾಣಿಕರು ಹರಸಾಹಸಪಟ್ಟರು. ಚೌಧರಿ ಫತೇಹ್ ಸಿಂಗ್ ಮಾರ್ಗವೂ ಜಲಾವೃತ ಗೊಂಡಿದ್ದು, ಜನರು ಮಾಲ್ ರೋಡ್ ಸಿಗ್ನಲ್‌ನಿಂದ ಖೈಬರ್ ಪಾಸ್, ಮಜ್ನು ಕಾ ಟೀಲಾ, ವಜೀರಾ ಬಾದ್ ಮೇಲ್ಸೇತುವೆ ಮೂಲಕ ಬುರಾಡಿಗೆ ಹೋಗಲು ದೆಹಲಿ ಪೊಲೀಸರು ಸಲಹೆ ನೀಡಿದರು. ಕೆಲವೆಡೆ ಮಳೆ: ಸೋಮವಾರ ದೆಹಲಿಯ ಕೆಲವೆಡೆ ಮಳೆ ಸುರಿದಿದ್ದು, ಕನಿಷ್ಠ ತಾಪಮಾನವು 29 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ಇದು ಈ ವರ್ಷದಲ್ಲಿ ದಾಖಲಾದ ಸರಾಸರಿ ತಾಪಮಾನಕ್ಕಿಂತ 1.8 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಚೇತರಿಸಿಕೊಳ್ಳುತ್ತಿರುವ ಅಸ್ಸಾಂ ಪ್ರವಾಹದಿಂದ ತತ್ತರಿಸಿದ್ದ ಅಸ್ಸಾಂನಲ್ಲಿ ಸೋಮವಾರ ಪರಿಸ್ಥಿತಿ ಸುಧಾರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಾರಿಯ ಪ್ರವಾಹ, ಭೂಕುಸಿತ, ಬಿರುಗಾಳಿ ಮತ್ತು ಸಿಡಿಲಿಗೆ ಬಲಿಯಾದವರ ಒಟ್ಟು ಸಂಖ್ಯೆ 109ಕ್ಕೆ ಏರಿಕೆಯಾಗಿದೆ. ‘ರಾಜ್ಯದ ಬಹುತೇಕ ಜಲಾವೃತ ಪ್ರದೇಶಗಲ್ಲಿ ನೀರು ಇಳಿಮುಖವಾಗುತ್ತಿದೆ. ಮಳೆ ನಿಂತಿರುವುದರಿಂದ ಪರಿಸ್ಥಿತಿ ಮತ್ತಷ್ಟು ಸುಧಾರಿಸುವ ಸಾಧ್ಯತೆಯಿದೆ’ ಎಂದು ಎಎಸ್‌ಡಿಎಂಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.