ರಾಜಕೀಯ ನಿಮ್ಮ ಕ್ಷೇತ್ರವಲ್ಲ,ಅದರ ಮಾತು ಬೇಡ: ಶಂಕರಾಚಾರ್ಯರಿಗೆ ಸಂಜಯ ನಿರುಪಮ ಮನವಿ ಮುಂಬೈ: ‘ರಾಜಕೀಯವು ಉತ್ತರಾಖಂಡದ ಜ್ಯೋತಿರ್‌ ಪೀಠದ ಶಂಕರಾಚಾರ್ಯ, ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರ ಕ್ಷೇತ್ರವಲ್ಲ. ಹೀಗಾಗಿ ಆ ಕುರಿತು ಅವರು ಪ್ರತಿಕ್ರಿಯಿಸದಿರುವುದೇ ಒಳ್ಳೆಯದು’ ಎಂದು ಶಿವಸೇನಾ ಮುಖಂಡ ಸಂಜಯ ನಿರುಪಮ ಹೇಳಿದ್ದಾರೆ. ಶಿವಸೇನಾ (ಯುಬಿಟಿ) ಮುಖಂಡ ಉದ್ಧವ ಠಾಕ್ರೆ ಮನೆಗೆ ಸೋಮವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ಸ್ವಾಮೀಜಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ‘ನೀವು ನಮ್ಮ ಧಾರ್ಮಿಕ ಗುರುಗಳು. ಧರ್ಮ ಹಾಗೂ ಅಧ್ಯಾತ್ಮ ಕುರಿತು ನಮಗೆ ಮಾರ್ಗದರ್ಶನ ಮಾಡಿ. ಆದರೆ ರಾಜಕೀಯ ಕುರಿತ ಹೇಳಿಕೆಗಳನ್ನು ನೀಡಬೇಡಿ. ಅದು ನಿಮ್ಮ ಕ್ಷೇತ್ರವಲ್ಲ’ ಎಂದಿದ್ದಾರೆ. ‘ಕಾಂಗ್ರೆಸ್ ಮತ್ತು ಅವಿಭಜಿತ ಎನ್‌ಸಿಪಿ ಜೊತೆ ಕೈಜೋಡಿಸಿದ್ದೇ ಉದ್ಧವ್ ಠಾಕ್ರೆ ಅವರು ಮಾಡಿದ ದ್ರೋಹ. ಒಂದೊಮ್ಮೆ ಇದು ದ್ರೋಹವಲ್ಲ ಎಂದಾದರೆ ತಮ್ಮ ರಾಜಕೀಯ ಆಕಾಂಕ್ಷೆಗಳನ್ನು ಹೊಂದಲು ತೆಗೆದುಕೊಂಡ ಕ್ರಮ ಎಂದು ಹೇಳಬಹುದು’ ಎಂದು ಉದ್ಧವ್ ವಿರುದ್ಧ ನಿರುಪಮ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಶಿವಸೇನಾ (ಯುಬಿಟಿ) ಪಕ್ಷದ ಮುಖಂಡ ಸಂಜಯ ರಾವುತ್, ‘ಶಂಕರಾಚಾರ್ಯರ ಮಾತುಗಳಿಗೆ ಸಹಮತ ತೋರದವರು ಹಿಂದುತ್ವವನ್ನು ಒಪ್ಪಿಕೊಂಡಿಲ್ಲ ಎಂದರ್ಥ’ ಎಂದಿದ್ದಾರೆ. ‘ಉದ್ಧವ್ ಠಾಕ್ರೆ ಅವರಿಗೆ ದ್ರೋಹವಾಗಿದೆ. ಇದಕ್ಕೆ ಜನರು ಆಕ್ರೋಶಗೊಂಡಿದ್ದಾರೆ. ಮತ್ತೊಮ್ಮೆ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನಾಗಿ ನೋಡದ ಹೊರತು ಜನರ ನೋವು ತಣಿಯದು’ ಎಂದು ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.