ಮಹಿಳೆಯರ ಮೇಲೆ ಮರಳು ಸುರಿದು ಭಾಗಶಃ ಹೂತುಹಾಕಿದ್ದ ಪ್ರಕರಣ: ಒಬ್ಬನ ಬಂಧನ ರೇವಾ, ಮಧ್ಯಪ್ರದೇಶ: ಪ್ರತಿಭಟನೆ ನಡೆಸುತ್ತಿದ್ದ, ರಸ್ತೆ ನಿರ್ಮಾಣ ಕಾಮಗಾರಿಯ ಮಹಿಳಾ ಕಾರ್ಮಿಕರ ಮೇಲೆ ಟಿಪ್ಪರ್‌ನಲ್ಲಿದ್ದ ಮರಳು ಸುರಿದು, ಭಾಗಶಃ ಹೂತುಹಾಕಿದ್ದ ಪ್ರಕರಣದ ಸಂಬಂಧ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ. ರೇವಾ ಜಿಲ್ಲೆಯಲ್ಲಿ ನಡೆದ ಈ ಕೃತ್ಯ ಉಲ್ಲೇಖಿಸಿ ಪ್ರತಿಪಕ್ಷ ಕಾಂಗ್ರೆಸ್‌, ಆಡಳಿತಾರೂಢ ಬಿಜೆಪಿ ವಿರುದ್ಧ ಹರಿಹಾಯ್ದಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಟೀಕಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಮೋಹನ್‌ ಯಾದವ್ ಅವರು, ‘ಮಹಿಳೆಯರ ಸುರಕ್ಷತೆಯೇ ನಮ್ಮ ಸರ್ಕಾರದ ಪ್ರಥಮ ಆದ್ಯತೆ’ ಎಂದು ಹೇಳಿದ್ದಾರೆ. ಹಿನೊಟಾ ಜೊರೊಟ್‌ ಗ್ರಾಮದಲ್ಲಿ ನಡೆದಿದ್ದ ಈ ಕೃತ್ಯದ ಸಂಬಂಧ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಮಹಿಳೆಯರು ಭಾಗಶಃ ಹೂತುಹೋಗಿದ್ದ ದೃಶ್ಯದ ವಿಡಿಯೊ ಜಾಲತಾಣದಲ್ಲಿ ಸಾಕಷ್ಟು ಹಂಚಿಕೆಯಾಗಿದೆ. ಭಾಗಶಃ ಹೂತುಹೋಗಿದ್ದ ಮಹಿಳೆಯರನ್ನು ಗ್ರಾಮಸ್ಥರು ಹೊರಗೆಳೆದು, ರಕ್ಷಿಸಿದ್ದಾರೆ. ಎಡಿಜಿ ಜೈದೀಪ್‌ ಪ್ರಸಾದ್ ಅವರು, ‘ಘಟನೆಗೆ ಕೌಟುಂಬಿಕ ವಿವಾದ ಕಾರಣ. ಮೂವರ ವಿರುದ್ಧ ದೂರು ದಾಖಲಾಗಿದೆ. ಟಿಪ್ಪರ್ ಚಾಲಕನನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಇತರ ಇಬ್ಬರಿಗಾಗಿ ಶೋಧ ನಡೆದಿದೆ’ ಎಂದು ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.