ಭೂಕುಸಿತ, ಹಳಿಗೆ ಬಿದ್ದ ಮರ: ಕರ್ನಾಟಕ–ಗೋವಾ ನಡುವಿನ ರೈಲು ಸಂಚಾರದಲ್ಲಿ ವ್ಯತ್ಯಯ ಪಣಜಿ: ಕರ್ನಾಟಕ–ಗೋವಾ ಗಡಿಭಾಗದ ದೂದ್‌ಸಾಗರ್ ಹಾಗೂ ಸೊನೌಲಿ ನಡುವೆ ಭೂಕುಸಿತ ಸಂಭವಿಸಿ ನೈರುತ್ಯ ರೈಲ್ವೆಯ ಐದು ರೈಲುಗಳ ಸಂಚಾರಕ್ಕೆ ಅಡಚಣೆಯಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಲೊಂಡಾ ಹಾಗೂ ತಿನಯ್‌ಘಾಟ್‌ ನಡುವೆ ಹಳಿಗೆ ಮರಬಿದ್ದಿದ್ದು, ಓವರ್‌ಹೆಡ್ ವಿದ್ಯುತ್‌ ಪೂರೈಕೆಗೆ ತೊಡಕುಂಟಾಗಿದೆ. ಈ ಎರಡೂ ಘಟನೆಗಳು ಗುರುವಾರ ಮಧ್ಯರಾತ್ರಿ 12.55ರ ವೇಳೆಗೆ ನಡೆದಿದೆ. ಹಳಿ ಮೇಲೆ ಬಿದ್ದಿದ್ದ ಮಣ್ಣು ಹಾಗೂ ಮರವನ್ನು ತೆರವುಗೊಳಿಸಲಾಗಿದ್ದು, ಶುಕ್ರವಾರ ಬೆಳಿಗ್ಗೆ 6 ಗಂಟೆ ಬಳಿಕ ರೈಲು ಸಂಚಾರ ಪುನಾರಂಭಗೊಂಡಿದೆ ಎಂದು ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಾಡಿ ಮಾಹಿತಿ ನೀಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.