ಪಿಂಚಣಿ ನೌಕರನ ಹಕ್ಕು; ಉದಾರ ಕೊಡುಗೆ ಅಲ್ಲ: ಸುಪ್ರೀಂ ಕೋರ್ಟ್ ನವದೆಹಲಿ: ಪಿಂಚಣಿಯು ನೌಕರನಿಗೆ ನಿವೃತ್ತಿನ ನಂತರದಲ್ಲಿ ಸಿಗುವ ಹಕ್ಕು; ಅದು ಉದಾರ ಕೊಡುಗೆ ಅಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ, ಸಂಬಂಧಪಟ್ಟ ನಿಯಮಗಳು ಅಥವಾ ಯೋಜನೆಯ ಅಡಿಯಲ್ಲಿ ಅವಕಾಶ ಇದ್ದರೆ ಮಾತ್ರ ಪಿಂಚಣಿಯನ್ನು ಕೇಳಬಹುದು ಎಂದು ಅದು ಸ್ಪಷ್ಟಪಡಿಸಿದೆ. ‘ನೌಕರನೊಬ್ಬ ಪಿಂಚಣಿಗೆ ಅರ್ಹವಾಗಿರುವ ಹುದ್ದೆಯನ್ನು ಹೊಂದಿರದೆ ಇದ್ದರೆ ಆತ ಪಿಂಚಣಿ ಕೇಳಲು ಅವಕಾಶ ಇಲ್ಲ. ನಿಯಮಗಳ ಅಡಿಯಲ್ಲಿ ಪಿಂಚಣಿಯ ವ್ಯಾಪ್ತಿಯಲ್ಲಿ ಇಲ್ಲದ ನೌಕರನಿಗೆ ‍ಪಿಂಚಣಿ ಕೊಡುವಂತೆ ಕೋರ್ಟ್‌ ಕೂಡ ಹೇಳಲಾಗದು’ ಎಂದು ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರು ಇದ್ದ ವಿಭಾಗೀಯ ಪೀಠವು ಹೇಳಿದೆ. ಉತ್ತರ ಪ್ರದೇಶ ರಸ್ತೆಸಾರಿಗೆ ನಿವೃತ್ತ ಅಧಿಕಾರಿಗಳ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಪೀಠವು, ಈ ಮಾತು ಹೇಳಿದೆ. ಬೇರೆ ಅರ್ಜಿಗಳ ವಿಚಾರಣೆ ನಡೆಸಿರುವ ಪೀಠವು, ಉತ್ತರ ಪ್ರದೇಶ ರಾಜ್ಯ ರಸ್ತೆಸಾರಿಗೆ ನಿಗಮದಲ್ಲಿ ವಿಲೀನಗೊಂಡ, ಹಿಂದೆ ಸರ್ಕಾರದ ನೌಕರರಾಗಿದ್ದವರು ಪಿಂಚಣಿಗೆ ಅರ್ಹರು ಎಂದು ಹೇಳಿದೆ. ‘ಇವರ ಸೇವಾ ಷರತ್ತುಗಳು ಸರ್ಕಾರದ ಅಧಿನದಲ್ಲಿ ಇದ್ದಾಗಿನ ಷರತ್ತುಗಳಿಗಿಂತ ಕಡಿಮೆ ಆಗಿರುವಂತಿಲ್ಲ’ ಎಂಬ ಮಾತು ಪಿಂಚಣಿಯನ್ನು ನೀಡುವುದಕ್ಕೆ ಅನ್ವಯವಾಗುತ್ತದೆ ಎಂದು ಪೀಠ ಹೇಳಿದೆ. ಆದರೆ, ನಿಗಮದಲ್ಲಿ ವಿಲೀನ ಆಗುವ ಮೊದಲು ಪಿಂಚಣಿಗೆ ಅರ್ಹವಾದ ಹುದ್ದೆಯನ್ನು ಹೊಂದಿರದೆ ಇದ್ದರೆ, ಅಂಥವರಿಗೆ ಪಿಂಚಣಿ ಸಿಗುವುದಿಲ್ಲ ಎಂದು ಪೀಠ ಹೇಳಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.