ಆಟೊ ಚಾಲಕನ ಜೊತೆ ವಾಗ್ವಾದದ ವೇಳೆ ಹೃದಯಾಘಾತ: ಶಿವಸೇನಾ ನಾಯಕನ ಮಗ ಸಾವು ಪಾಲ್ಘರ್: ಶಿವಸೇನಾ(ಯುಬಿಟಿ) ಬಣದ ನಾಯಕನ ಮಗ ಆಟೊ ಚಾಲಕನ ಜೊತೆ ವಾಗ್ವಾದ ನಡೆಸುತ್ತಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯ ವಸೈನಲ್ಲಿ ನಡೆದಿದೆ. ಈ ಸಂಬಂಧ ಅಪರಿಚಿತ ವ್ಯಕ್ತಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಥಾಣೆಯ ಅವಿಭಜಿತ ಶಿವಸೇನಾದ ಮಾಜಿ ಜಿಲ್ಲಾಧ್ಯಕ್ಷರಾದ ರಘುನಾಥ್ ಮೋರೆ ಅವರ ಮಗ ಮಿಲಿಂದ್ ಮೋರೆ ಮೃತ ವ್ಯಕ್ತಿ. ಈ ಘಟನೆ ನಡೆದಾಗ ರಘುನಾಥ್ ಅವರು ತಮ್ಮ ಕುಟುಂಬದ ಜೊತೆ ನವಪುರ್ ರೆಸಾರ್ಟ್‌ನಲ್ಲಿದ್ದರು ಎಂದು ಡಿಸಿಪಿ ಜಯಂತ ಬಜಬಾಳೆ ತಿಳಿಸಿದ್ದಾರೆ. ‘ರೆಸಾರ್ಟ್‌ನಿಂದ ಹೊರಬಂದ ಮಗ ಆಟೊ ಡ್ರೈವರ್ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ. ಈ ಸಂದರ್ಭ ಕುಸಿದುಬಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾರ್ಗ ಮಧ್ಯೆಯೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ’ಎಂದು ವೈದ್ಯರು ಖಚಿತಪಡಿಸಿದ್ದಾರೆ. ಮೋರೆ ಸಂಬಂಧಿಕರ ದೂರಿನ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 105ರ ಅನ್ವಯ ಅಪರಿಚಿತ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಿಲಿಂದ್ ಮೋರೆ ಸದ್ಯ ಥಾಣೆಯ ಶಿವಸೇನಾ(ಯುಬಿಟಿ) ಬಣದ ಜಿಲ್ಲಾ ಉಪಾಧ್ಯಕ್ಷರಾಗಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.