ಸ್ವಯಂ ಶಿಸ್ತು ಇಲ್ಲದೆ ಯಾವುದೇ ಆಚರಣೆ ಪೂರ್ಣವಾಗಲ್ಲ: ಕಾವಡ್ ಯಾತ್ರಿಗಳಿಗೆ ಯೋಗಿ ಲಖನೌ: ‘ಸ್ವಯಂ ಶಿಸ್ತು ಇಲ್ಲದೆ ಯಾವುದೇ ಹಬ್ಬ, ಆಚರಣೆ ಅಥವಾ ಸಾಧನೆ ಪೂರ್ಣಗೊಳ್ಳುವುದಿಲ್ಲ’ ಎಂದು ಕಾವಡ್ ಯಾತ್ರಾರ್ಥಿಗಳನ್ನು ಉದ್ದೇಶಿಸಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದರು. ಕಾವಡ್ ಯಾತ್ರೆ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಕೇಂದ್ರ ಸರ್ಕಾರದ ಸಮನ್ವಯದೊಂದಿಗೆ ಕಾವಡ್ ಯಾತ್ರೆಗೆ ಸಂಪೂರ್ಣ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು. ‘ಶ್ರಾವಣ ಮಾಸದಲ್ಲಿ ನಡೆಯುವ ಕಾವಡ್‌ ಯಾತ್ರೆಯು ಪ್ರಪಂಚದಾದ್ಯಂತ ಪ್ರಸಿದ್ಧಿ ಪಡೆದಿದೆ. ಈ ವೇಳೆ ಉತ್ತರ ಭಾರತ ಸೇರಿದಂತೆ ದೇಶದಾದ್ಯಂತ ಶಿವಭಕ್ತರು ಮಹಾದೇವನ ಆರಾಧನೆಯಲ್ಲಿ ತೊಡಗಿರುತ್ತಾರೆ. ಶಿವ ದೇವಾಲಯಗಳಲ್ಲಿ ಜಲಾಭಿಷೇಕ ಮಾಡುವ ಮೂಲಕ ತಮ್ಮ ಭಕ್ತಿಯನ್ನು ತೋರ್ಪಡಿಸುತ್ತಾರೆ’ ಎಂದು ಅವರು ಹೇಳಿದರು. ‘ಭಕ್ತಾದಿಗಳು ಯಾತ್ರೆಯನ್ನು ಆನಂದಿಸುವುದು ಮಾತ್ರವಲ್ಲ ಸ್ವಯಂ ಶಿಸ್ತು ಮತ್ತು ನಂಬಿಕೆಯನ್ನು ಕಾಪಾಡಿಕೊಳ್ಳುವ ಮೂಲಕ ಯಾತ್ರೆಯನ್ನು ಯಶಸ್ವಿಗೊಳಿಸಲು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದ್ದಾರೆ. ‘ಯಾವುದೇ ಹಬ್ಬ, ಆಚರಣೆ ಅಥವಾ ಸಾಧನೆ ಸ್ವಯಂ ಶಿಸ್ತು ಇಲ್ಲದೆ ಪೂರ್ಣಗೊಳ್ಳುವುದಿಲ್ಲ. ಸುಗಮ ಮತ್ತು ಸುರಕ್ಷಿತವಾಗಿ ಯಾತ್ರೆ ಪೂರ್ಣಗೊಳಿಸಬೇಕೆಂದರೆ ಆಂತರಿಕವಾಗಿ ಅಲ್ಲದೇ ಬಾಹ್ಯವಾಗಿಯೂ ಶ್ರದ್ಧೆ ಹೊಂದಿರಬೇಕಾಗುತ್ತದೆ. ಶಿವನನ್ನು ಪೂಜಿಸಬೇಕೆಂದರೆ ಮೊದಲು ಶಿವನಾಗಬೇಕು’ ಎಂದು ಹೇಳಿದರು. ಜುಲೈ 22ರಂದು ಪ್ರಾರಂಭವಾದ ಕಾವಡ್ ಯಾತ್ರೆಯು ಆಗಸ್ಟ್ 6ಕ್ಕೆ ಕೊನೆಗೊಳ್ಳಲಿದೆ. ಯಾತ್ರೆ ಆರಂಭವಾಗಿನಿಂದಲೂ ಕಾವಡ್ ಯಾತ್ರಾರ್ಥಿಗಳು ಸಾಗುವ ದಾರಿಯಲ್ಲಿ ಕೆಲವು ಹಿಂಸಾಚಾರದ ಘಟನೆಗಳು ವರದಿಯಾಗಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.