‘ರೇಲ್ ಮಿನಿಸ್ಟರ್ ಅಲ್ಲ, ಫೇಲ್ ಮಿನಿಸ್ಟರ್’.. ವೈಷ್ಣವ್ ಬಗ್ಗೆ ಕಾಂಗ್ರೆಸ್ ಕುಹಕ ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ರೈಲು ಅಪಘಾತಗಳನ್ನು ತಡೆಯದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ‘ರೇಲ್ ಮಿನಿಸ್ಟರ್ ಅಲ್ಲ, ಫೇಲ್ ಮಿನಿಸ್ಟರ್’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ. ಇಂದು ಮುಂಜಾನೆ ಜಾರ್ಖಂಡ್‌ನ ಸರಾಯ್‌ಕೆಲಾ–ಖರ್ಸಾವಾನ್‌ ಜಿಲ್ಲೆಯಲ್ಲಿ ಹೌರಾ–ಮುಂಬೈ ರೈಲಿನ ಕನಿಷ್ಠ 18 ಬೋಗಿಗಳು ಹಳಿ ತಪ್ಪಿದ ಪರಿಣಾಮ ಇಬ್ಬರು ಮೃತಪಟ್ಟು, 20 ಮಂದಿ ಗಾಯಗೊಂಡಿದ್ದರು. ಈ ಘಟನೆಯನ್ನು ಉಲ್ಲೇಖಿಸಿ ಕಾಂಗ್ರೆಸ್ ಹರಿಹಾಯ್ದಿದೆ. ಜೂನ್‌ನಿಂದ ಇಲ್ಲಿವರೆಗೆ 12ಕ್ಕೂ ಹೆಚ್ಚು ರೈಲು ಅಪಘಾತಗಳು ನಡೆದಿದೆ. 17 ಜನ ಮೃತರಾಗಿದ್ದಾರೆ. ಆದರೂ ರೈಲು ಅಪಘಾತಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ರೈಲು ಅಪಘಾತಗಳನ್ನು ತಡೆಯುವಲ್ಲಿ ರೈಲ್ವೆ ಸಚಿವರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಲೇವಡಿ ಮಾಡಿದೆ. ಪ್ರತಿವಾರ ಒಂದಿಲ್ಲ ಒಂದು ರೈಲು ಅಪಘಾತ ನಡೆಯುತ್ತಿರುವುದು ಮೋದಿ ಭಾರತದ ಅಸಲಿ ಕಥೆ ಎಂದು ಎಕ್ಸ್ ತಾಣದಲ್ಲಿ ಮಾಡಿರುವ ಪೋಸ್ಟ್‌ ನಲ್ಲಿ ತಿಳಿಸಿದೆ. ಬಾಲೇಸೂರ್ ರೈಲು ಘಟನೆಯ ನಂತರವೂ ರೈಲ್ವೆ ಇಲಾಖೆಗೆ ರೈಲು ಸಚಿವರು ಬಿಸಿ ಮುಟ್ಟಿಸಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ. ‘ಹೌರಾ–ಮುಂಬೈ ರೈಲಿನ 22 ಕೋಚ್‌ಗಳ ಪೈಕಿ 18 ಕೋಚ್‌ಗಳು ಹಳಿತಪ್ಪಿವೆ. ಈ ಪೈಕಿ 16 ಪ್ರಯಾಣಿಕ ಕೋಚ್‌ಗಳು, ಒಂದು ಪವರ್‌ ಕಾರ್‌ ಮತ್ತೊಂದು ಪ್ಯಾಂಟ್ರಿ ಕಾರ್’ ಎಂದು ವಕ್ತಾರರು ತಿಳಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.