ಕೇದಾರನಾಥ | ಭೂಕುಸಿತದಲ್ಲಿ ಸಿಲುಕಿದ್ದ 51 ಯಾತ್ರಾರ್ಥಿಗಳ ರಕ್ಷಣೆ: ಸಿಎಂ ಯಾದವ್‌ ಭೋಪಾಲ್‌: ಮೇಘಸ್ಫೋಟದಿಂದಾಗಿ ಕೇದಾರನಾಥದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ರಾಜ್ಯದ 61 ಯಾತ್ರಾರ್ಥಿಗಳ ಪೈಕಿ 51 ಮಂದಿಯನ್ನು ಉತ್ತರಾಖಂಡ ರಾಜ್ಯ ಅಧಿಕಾರಿಗಳ ಸಹಾಯದಿಂದ ಏರ್‌ ಲಿಫ್ಟ್‌ ಮೂಲಕ ರುದ್ರಪ್ರಯಾಗಕ್ಕೆ ಕರೆತರಲಾಗಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್‌ ಯಾದವ್‌ ತಿಳಿಸಿದ್ದಾರೆ. ಇನ್ನೂ ಹತ್ತು ಮಂದಿ ಕೇದಾರನಾಥದಲ್ಲಿಯೇ ಸಿಲುಕಿದ್ದಾರೆ. ಆದರೆ, ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಯಾದವ್‌ ಹೇಳಿದ್ದಾರೆ. ರಾಜ್ಯದ ಶಿವಪುರಿ ಜಿಲ್ಲೆಯ ಬದರ್ವಾಸ್‌ ನಗರದ ಸುಮಾರು 61 ಮಂದಿ ಯಾತ್ರಾರ್ಥಿಗಳು ಬಸ್‌ ಮತ್ತು ಇತರ ವಾಹನಗಳ ಮೂಲಕ ಉತ್ತರಾಖಂಡದ ‘ಚಾರ್‌ಧಾಮ್‌’ ಯಾತ್ರೆಗೆ ತೆರಳಿದ್ದರು. ಕೇದಾರನಾಥದಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ಯಾತ್ರಾರ್ಥಿಗಳು ಅಲ್ಲಿಯೇ ಸಿಲುಕಿಕೊಂಡಿದ್ದರು ಎಂದು ಯಾದವ್‌ ತಿಳಿಸಿದ್ದಾರೆ. ಅವಘಡದ ಕುರಿತು ನಮಗೆ ತಕ್ಷಣವೇ ಮಾಹಿತಿ ದೊರೆಯಿತು. ನಾವು ಉತ್ತರಾಖಂಡ ಸರ್ಕಾರವನ್ನು ಸಂಪರ್ಕಿಸಿ ಸಂಕಷ್ಟದಲ್ಲಿ ಸಿಲುಕಿದ್ದ 51 ಯಾತ್ರಾರ್ಥಿಗಳನ್ನು ಹೆಲಿಕ್ಟಾಪರ್‌ ಮೂಲಕ ರುದ್ರಪ್ರಯಾಗಕ್ಕೆ ಏರ್‌ಲಿಫ್ಟ್‌ ಮಾಡಲಾಯಿತು. ಉಳಿದ 10 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಈ ಕುರಿತು ರಾಜ್ಯ ಸರ್ಕಾರವು ಉತ್ತರಾಖಂಡ ಸರ್ಕಾರದೊಂದಿಗೆ ಸಂಪರ್ಕದಲ್ಲಿದೆ ಎಂದು ಅವರು ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.