ಒಪ್ಪಂದವಾಗಿ 24 ಗಂಟೆ ಕಳೆಯುವ ಮೊದಲೇ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಇಂಫಾಲ: ಮೈತೇಯಿ ಮತ್ತು ಹಮಾರ್‌ ಸಮುದಾಯದ ನಡುವೆ ಒಪ್ಪಂದವಾಗಿ 24 ಗಂಟೆ ಕಳೆಯುವ ಮೊದಲೇ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ನಡೆದಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಮಣಿಪುರದ ಜಿರಿಬಾಮ್‌ನಲ್ಲಿ ಗುಂಡಿನ ದಾಳಿ ನಡೆಸಿ, ಮನೆಯೊಂದಕ್ಕೆ ಬೆಂಕಿ ಹಚ್ಚಲಾಗಿದೆ. ಲಾಲ್ಪಾನಿ ಗ್ರಾಮದಲ್ಲಿ ನಿವಾಸಿಗಳು ತ್ಯಜಿಸಿದ್ದ ಮನೆಯನ್ನು ಶಸ್ತ್ರಸಜ್ಜಿತ ವ್ಯಕ್ತಿಗಳು ಶುಕ್ರವಾರ ರಾತ್ರಿ ಸುಟ್ಟು ಹಾಕಿದ್ದಾರೆ. ಅಲ್ಲದೆ, ಗ್ರಾಮವನ್ನು ಗುರಿಯಾಗಿಸಿ ಹಲವು ಸುತ್ತು ಶೆಲ್‌ ಮತ್ತು ಗುಂಡಿನ ದಾಳಿ ನಡೆಸಿದರು. ಘಟನೆಯ ನಂತರ ಭದ್ರತಾ ಪಡೆಗಳು ಈ ಪ್ರದೇಶಕ್ಕೆ ದೌಡಾಯಿಸಿವೆ ಎಂದು ಅವರು ಹೇಳಿದರು. ‘ಈ ಪ್ರದೇಶದಲ್ಲಿ ಮೈತೇಯಿ ಸಮುದಾಯದ ಕೆಲವರು ವಾಸಿಸುತ್ತಿದ್ದರು. ಜಿಲ್ಲೆಯಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ಮೈತೇಯಿ ಸಮುದಾಯದವರು ಈ ಪ್ರದೇಶ ತೊರೆದಿದ್ದರಿಂದ ಮನೆಗಳು ಖಾಲಿ ಬಿದ್ದಿವೆ. ಈ ಭಾಗದಲ್ಲಿನ ಭದ್ರತಾ ಲೋಪಗಳ ಲಾಭ ಪಡೆದ ದುಷ್ಕರ್ಮಿಗಳು ಮನೆಗೆ ಬೆಂಕಿ ಹಚ್ಚಿದ್ದಾರೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ನೆರೆಯ ಅಸ್ಸಾಂನ ಕ್ಯಾಚಾರ್‌ನಲ್ಲಿರುವ ಸಿಆರ್‌ಪಿಎಫ್ ಕೇಂದ್ರದಲ್ಲಿ ಗುರುವಾರ ನಡೆದ ಸಭೆಯಲ್ಲಿ ಮೈತೇಯಿ ಮತ್ತು ಹಮಾರ್‌ ಸಮುದಾಯಗಳ ಪ್ರತಿನಿಧಿಗಳು ಶಾಂತಿ ಒಪ್ಪಂದಕ್ಕೆ ಬಂದಿದ್ದರು. ಜಿರಿಬಾಮ್ ಜಿಲ್ಲಾಡಳಿತ, ಅಸ್ಸಾಂ ರೈಫಲ್ಸ್ ಮತ್ತು ಸಿಆರ್‌ಪಿಎಫ್ ಸಿಬ್ಬಂದಿ ಸಮ್ಮುಖದಲ್ಲಿ ಸಭೆ ನಡೆದಿತ್ತು. ಜಿಲ್ಲೆಯ ತಾಡೌ, ಪೈಟೆ ಮತ್ತು ಮಿಜೋ ಸಮುದಾಯದ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಮುಂದಿನ ಸಭೆ ಆಗಸ್ಟ್ 15 ರಂದು ನಡೆಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.