ಬಾಂಗ್ಲಾವು ದಂಗೆಕೋರರಿಗೆ ಮತ್ತೊಮ್ಮೆ ‘ಸ್ವರ್ಗ’ವಾಗಬಾರದು: ಹಿಮಂತ ಗುವಾಹಟಿ: ‘ದಂಗೆಕೋರರಿಗೆ ಬಾಂಗ್ಲಾದೇಶವು ‘ಸ್ವರ್ಗ’ ಎಂಬಂತೆ ಮತ್ತೊಮ್ಮೆ ಆಗಬಾರದು. ಶೇಕ್‌ ಹಸೀನಾ ಅವರು ಪ್ರಧಾನಿ ಆಗುವುದಕ್ಕೂ ಮೊದಲು ಬಾಂಗ್ಲಾದೇಶವು ದಂಗೆಕೋರರಿಗೆ ಸುರಕ್ಷಿತ ನೆಲೆ ಎಂಬಂತಿತ್ತು’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಬುಧವಾರ ಅಭಿಪ್ರಾಯಪಟ್ಟರು. ಆ ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆಯೂ ಕಳವಳ ವ್ಯಕ್ತಪಡಿಸಿದರು. ‘2041ರ ಹೊತ್ತಿಗೆ ರಾಜ್ಯದಲ್ಲಿ ಮುಸ್ಲೀಮರು ಬಹುಸಂಖ್ಯಾತರಾದರೆ, ರಾಜ್ಯ ಪರಿಸ್ಥಿತಿ ಏನಾಗಬಹುದು. ಆ ದೇಶದ ಪರಿಸ್ಥಿತಿಯು ಭಾರತದ ಪೂರ್ವ ಭಾಗದ ರಾಜ್ಯಗಳಿಗೆ ಕಳವಳಕಾರಿಯಾಗಲಿದೆ’ ಎಂದರು. ‘ಬಾಂಗ್ಲಾದೇಶದ ಪರಿಸ್ಥಿತಿಯು ಎರಡು ಕಾರಣಗಳಿಂದಾಗಿ ಕಳವಳಕಾರಿಯಾಗಿದೆ. ಒಂದು: ಆ ದೇಶದ ಜನರು ಭಾರತದ ಒಳಗೆ ನುಸುಳುವ ಸಾಧ್ಯತೆಯು ಹೆಚ್ಚುತ್ತದೆ. ಇದಕ್ಕಾಗಿ ನಮ್ಮ ಗಡಿಗಳಲ್ಲಿನ ಭದ್ರತೆಯನ್ನು ಹೆಚ್ಚಿಸಬೇಕಾಗುತ್ತದೆ. ಎರಡನೇದು: ಬಾಂಗ್ಲಾದೇಶದ ಮೂಲಕವಾಗಿ ಈಶಾನ್ಯ ರಾಜ್ಯಗಳನ್ನು ಪ್ರವೇಶಿಸುವುದಕ್ಕೆ ಆ ದೇಶವು ಅನುವು ಮಾಡಿಕೊಡಬಾರದು. ನುಸುಳುಕೋರರಿಗೆ ಅದು ಸ್ವರ್ಗವಾಗಬಾರದು. ಹಸೀನಾ ಅವರ ಅವಧಿಯಲ್ಲಿ ನಮ್ಮ ರಾಜ್ಯಗಳಲ್ಲಿ ಶಾಂತಿ ನೆಲಸಿತ್ತು’ ಎಂದು ಹಿಮಂತ ಹೇಳಿದರು. * ಬಿಎಸ್‌ಎಫ್‌ ಮಹಾನಿರ್ದೇಶಕ ದಲ್‌ಜೀತ್‌ ಸಿಂಗ್‌ ಚೌಧರಿ ಅವರು ಬುಧವಾರ ತ್ರಿಪುರಾಕ್ಕೆ ಭೇಟಿ ನೀಡಿ ಭಾರತ–ಬಾಂಗ್ಲಾ ಗಡಿಯಲ್ಲಿನ ಸ್ಥಿತಿಗತಿಗಳನ್ನು ಹಾಗೂ ತುರ್ತಿನ ಸಮಯದಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಕುರಿತ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದರು * ಕಳೆದ 24 ಗಂಟೆಗಳಲ್ಲಿ 11 ಮಂದಿ ಬಾಂಗ್ಲಾದೇಶೀಯರನ್ನು ತ್ರಿಪುರಾದಲ್ಲಿ ಬಂಧಿಸಲಾಗಿದೆ. ಇವರಿಂದ ₹50 ಲಕ್ಷ ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರೆಲ್ಲರೂ ಬಾಂಗ್ಲಾದೇಶಕ್ಕೆ ಮರಳುವ ತಯಾರಿಯಲ್ಲಿದ್ದರು ಎನ್ನಲಾಗಿದೆ. ಇವರು ಮಾದಕವಸ್ತು ಕಳ್ಳಸಾಗಣೆದಾರರು ಎಂದು ಶಂಕಿಸಲಾಗಿದೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.