ಬಾಂಗ್ಲಾದಲ್ಲಿ ಹಿಂದೂಗಳನ್ನು ರಕ್ಷಿಸಿ: ಹಿಂದೂ ಜನಜಾಗೃತಿ ಸಮಿತಿ ಮುಂಬೈ: ಬಾಂಗ್ಲಾದೇಶದಲ್ಲಿರುವ ಹಿಂದೂಗಳು ಮತ್ತು ದೇಗುಲಗಳನ್ನು ರಕ್ಷಣೆ ಮಾಡಿ ಎಂದು ಹಿಂದೂ ಜನಜಾಗೃತಿ ಸಮಿತಿಯು (ಎಚ್‌ಜೆಎಸ್) ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದೆ. ಹೀಗೆ ಸ್ಥಳಾಂತರಗೊಂಡ ಹಿಂದೂಗಳಿಗೆ ಪೌರತ್ವ ತಿದ್ದುಪಡಿ ಕಾಯ್ದೆ ಅಡಿಯಲ್ಲಿ ಆಶ್ರಯ ನೀಡಿ ಎಂದೂ ಮನವಿ ಮಾಡಿದೆ. ಭಾರತ ಸರ್ಕಾರವು ಸಕಾಲದಲ್ಲಿ ಮಧ್ಯಪ್ರದೇಶ ಮಾಡದಿದ್ದಲ್ಲಿ ಪಾಕಿಸ್ತಾನವು ಪರಿಸ್ಥಿತಿಯ ಲಾಭ ಪಡೆದು ಅಲ್ಲಿ ಹಿಂದೂಗಳ ನರಮೇಧ ಮಾಡುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ. ‘ಸರ್ಕಾರ ವಿರೋಧಿ ಚಟುವಟಿಕೆಯು ಹಿಂಸಾತ್ಮಕ ರೂಪ ಪಡೆದಿದೆ. ಹಿಂದೂಗಳನ್ನು ಗುರಿಯಾಗಿಸಿಕೊಂಡು ಹತ್ಯೆ, ಲೂಟಿಗಳು ನಡೆಯುತ್ತಿವೆ, ದೇಗುಲಗಳನ್ನು ಧ್ವಂಸ ಮಾಡಲಾಗುತ್ತಿದೆ. ಇದು ಅಲ್ಪಸಂಖ್ಯಾತ ಹಿಂದೂಗಳಲ್ಲಿ ಭಯ ಹುಟ್ಟಿಸಿದೆ’ ಎಂದು ಎಚ್‌ಜೆಎಸ್‌ ರಾಷ್ಟ್ರೀಯ ವಕ್ತಾರ ರಮೇಶ್‌ ಶಿಂದೆ ಹೇಳಿದರು. ‘ಹಿಂದೂಗಳ ಮೇಲಿನ ದಾಳಿಯನ್ನು ತಡೆಯುವಂತೆ ಬಾಂಗ್ಲಾದೇಶದ ಸೇನೆಗೆ ಭಾರತ ಸರ್ಕಾರವು ನಿರ್ದೇಶನ ನೀಡಬೇಕು. ಅಲ್ಲಿರುವ ಹಿಂದೂಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು, ತಕ್ಷಣವೇ ಅವರಿಗೆ ಭದ್ರತೆ ಒದಗಿಸಬೇಕು’ ಎಂದು ಕೋರಿದರು. ‘ವಿಶ್ವಸಂಸ್ಥೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿ, ನಿಯೋಗವೊಂದು ಬಾಂಗ್ಲಾದೇಶಕ್ಕೆ ಭೇಟಿ ನೀಡಬೇಕು ಎಂದು ಒತ್ತಾಯಿಸಬೇಕು’ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.