: ರಕ್ಷಣಾ ಕಾರ್ಯಾಚರಣೆ ಮುಗಿಸಿ ಭಾಗಶಃ ವಾಪಸ್ ತೆರಳಿದ ಸೇನೆ ವಯನಾಡ್: ಭೂಕುಸಿತ ಬಾಧಿತ ವಯನಾಡ್‌ನಲ್ಲಿ ರಕ್ಷಣಾ ಕಾರ್ಯದಲ್ಲಿ ನಿಯೋಜಿಸಲಾಗಿದ್ದ ಸೇನೆಯನ್ನು, ಒಂಬತ್ತು ದಿನಗಳ ಬಳಿಕ ಗುರುವಾರ ಭಾಗಶಃ ಹಿಂದೆ ಕರೆಯಿಸಿಕೊಳ್ಳಲಾಗಿದೆ. ರಕ್ಷಣೆಗೆ ನೆರವಾಗಲು ಸೇನೆಯು ಇಲ್ಲಿ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಿದೆ. ಭಾಗಶಃ ಸೇನೆಯನ್ನು ವಾಪಸ್ ಕರೆಯಿಸಿಕೊಳ್ಳುವ ನಿರ್ಧಾರವನ್ನು ರಾಜ್ಯ ಲೋಕೋಪಯೋಗಿ ಸಚಿವ ಪಿ.ಎ.ಮಹಮ್ಮದ್‌ ರಿಯಾಸ್ ಪ್ರಕಟಿಸಿದರು. ‘ಸೇನೆಯು ಬಹುತೇಕ ತನ್ನ ಕಾರ್ಯ ನೆರವೇರಿಸಿದ್ದು, ಅದಕ್ಕಾಗಿ ಕೃತಜ್ಞತೆ ಸಲ್ಲಿಸುತ್ತೇವೆ’ ಎಂದು ಹೇಳಿದರು. ಸೇನೆಯು ಸುಮಾರು 190 ಅಡಿ ಉದ್ದದ ತಾತ್ಕಾಲಿಕ ಸೇತುವೆಯನ್ನು ದಾಖಲೆಯ ಕಡಿಮೆ ಸಮಯದಲ್ಲಿ ನಿರ್ಮಿಸಿತ್ತು. ಚುರುಕಾಗಿ ರಕ್ಷಣೆ ಮತ್ತು ಶೋಧ ಕಾರ್ಯವನ್ನು ನಡೆಸಿತ್ತು. ಸಂಕಷ್ಟದ ಸಂದರ್ಭದಲ್ಲಿ ಪರಿಹಾರ ಕಾರ್ಯಗಳಿಗೆ ಕೈಜೋಡಿಸಿತ್ತು ಎಂದು ಸ್ಮರಿಸಿದರು. ಕೊಚ್ಚಿ ವರದಿ: ಮುಂಡಕ್ಕೈ ಮತ್ತು ಚೂರಲ್‌ಮಲ ಸಂಭವಿಸಿದ ಭೂಕುಸಿತ ಅವಘಡ ಕುರಿತು ಕೇರಳ ಹೈಕೋರ್ಟ್ ಗುರುವಾರ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ. ನ್ಯಾಯಮೂರ್ತಿಗಳಾದ ಎ.ಕೆ.ಜಯಶಂಕರನ್ ನಂಬಿಯಾರ್ ಮತ್ತು ವಿ.ಎಂ.ಶ್ಯಾಮ್ ಕುಮಾರ್ ಅವರಿದ್ದ ಪೀಠವು, ಮಾಧ್ಯಮ ವರದಿಗಳ ಆಧಾರದಲ್ಲಿ ಪ್ರಕರಣ ದಾಖಲಿಸುವಂತೆ ರಿಜಿಸ್ಟ್ರಾರ್ ಜನರಲ್ ಅವರಿಗೆ ಸೂಚಿಸಿದೆ. ಶುಕ್ರವಾರ ಈ ಪ್ರಕರಣ ಪರಿಶೀಲನೆಗೆ ಬರಲಿಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.