ಐಎಎಸ್‌ ಆಕಾಂಕ್ಷಿಗಳ ಸಾವು ವಿಧಿಲಿಖಿತ: ಕೋರ್ಟ್‌ಗೆ ತರಬೇತಿ ಕೇಂದ್ರದ ಮಾಲೀಕರು ನವದೆಹಲಿ: ಕೋಚಿಂಗ್‌ ಸೆಂಟರ್‌ನ ತಳಮಹಡಿಗೆ ನೀರು ನುಗ್ಗಿ ಮೂವರು ಐಎಎಸ್‌ ಆಕಾಂಕ್ಷಿಗಳು ಸಾವನ್ನಪ್ಪಿದ ಘಟನೆಯು ‘ವಿಧಿಲಿಖಿತ’ ಎಂದು ತರಬೇತಿ ಕೇಂದ್ರದ ಸಹ ಮಾಲೀಕರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಕೋಚಿಂಗ್‌ ಸೆಂಟರ್‌ನ ಸಹ ಮಾಲೀಕರಾದ ಪರ್ವಿಂದರ್‌ ಸಿಂಗ್‌, ತಜಿಂದರ್‌ ಸಿಂಗ್‌, ಹರ್ವಿಂದರ್‌ ಸಿಂಗ್ ಮತ್ತು ಸರಬ್ಜಿತ್‌ ಸಿಂಗ್‌ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಅಂಜು ಬಜಾಜ್‌ ಚಂದನ ಅವರು ಶುಕ್ರವಾರ ನಡೆಸಿದರು. ‘ಈ ಘಟನೆಯು ವಿಧಿಲಿಖಿತ. ಸ್ಥಳೀಯ ಸಂಸ್ಥೆಯು ತನ್ನ ಕರ್ತವ್ಯವನ್ನು ನಿರ್ವಹಿಸಿದ್ದರೆ ದುರಂತವನ್ನು ತಪ್ಪಿಸಬಹುದಿತ್ತು’ ಎಂದು ನಾಲ್ವರು ಆರೋಪಿಗಳ ಪರ ಹಾಜರಿದ್ದ ವಕೀಲರು ನ್ಯಾಯಾಧೀಶರಿಗೆ ತಿಳಿಸಿದರು. ತಳಮಹಡಿಯನ್ನು ಲೈಬ್ರರಿಯಾಗಿ ಬಳಸುತ್ತಿರಲಿಲ್ಲ. ತರಗತಿ ಆರಂಭಕ್ಕೂ ಮುನ್ನ ವಿದ್ಯಾರ್ಥಿಗಳು ಒಟ್ಟು ಸೇರುತ್ತಿದ್ದ ಸ್ಥಳ ಅದಾಗಿದೆ ಎಂದೂ ಹೇಳಿದರು. ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಆಗಸ್ಟ್‌ 12ಕ್ಕೆ ನಿಗದಿಪಡಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.