ಬಡ್ತಿ ವಿಳಂಬ: ಜೆಎನ್‌ಯು ವಿಶ್ವವಿದ್ಯಾಲಯದ ಉಪನ್ಯಾಸಕರ ಉಪವಾಸ ಸತ್ಯಾಗ್ರಹ ನವದೆಹಲಿ: ಬಡ್ತಿ ನೀಡುವುದರಲ್ಲಿ ವಿಳಂಬವಾಗುತ್ತಿದೆ ಎಂದು ಆರೋಪಿಸಿ ದೆಹಲಿಯ ಜವಾಹರಲಾಲ್ ವಿಶ್ವವಿದ್ಯಾಲಯದ (ಜೆಎನ್‌ಯು) ಉಪನ್ಯಾಸಕರ ಸಂಘದ ಸದಸ್ಯರು ಸೋಮವಾರ 24 ಗಂಟೆಗಳ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಉಪನ್ಯಾಸಕರ ಸಂಘದ ಆರೋಪ‍ ಹಾಗೂ ಉ‍ಪವಾಸ ಸತ್ಯಾಗ್ರಹದ ಬಗ್ಗೆ ವಿಶ್ವವಿದ್ಯಾಲಯದ ಕುಲಪತಿ ಶಾಂತಿಶ್ರೀ ಡಿ. ಪಂಡಿತ್‌ ಅವರಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ಉಪನ್ಯಾಸಕರ ಸಂಘದ () ವಿವಿಧ ವಿಭಾಗಗಳ 12ಕ್ಕೂ ಹೆಚ್ಚು ಉಪನ್ಯಾಸಕರು ಉಪವಾಸ ಕುಳಿತಿದ್ದಾರೆ. ಭಾಷಾ ವಿಭಾಗದ ಹುಲ್ಲುಹಾಸಿನ ಮೇಲೆ ಕುಳಿತು ಸತ್ಯಾಗ್ರಹ ಮಾಡುತ್ತಿದ್ದಾರೆ. ‘ಬಡ್ತಿಯ ಬಗ್ಗೆ ನಿಜಾಂಶ ಹೇಳುತ್ತಿದ್ದೇವೆ’, ‘ಬಡ್ತಿ ಕಷ್ಟಪಟ್ಟು ಗಳಿಸಿಕೊಂಡಿದ್ದು‘, ‘ಬಡ್ತಿಗಾಗಿ ಕಾಯುತ್ತಿದ್ದೇವೆ’ ಎನ್ನುವ ಬರಹಗಳುಳ್ಳ ಪೋಸ್ಟರ್‌ಗಳು ಪ್ರತಿಭಟನಾ ಸ್ಥಳದಲ್ಲಿವೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗದ ವೃತ್ತಿ ಪ್ರಗತಿ ಯೋಜನೆಯ ಅನ್ವಯ ಬಡ್ತಿ ನೀಡುವುದರಲ್ಲಿ ತಾರತಮ್ಯ ಎಸಗಲಾಗುತ್ತಿದೆ. 2016ರ ಬಳಿಕ ಹಲವು ಬಾರಿ ವಿಳಂಬವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಸದ್ಯ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ವೃತ್ತಿ ಪ್ರಗತಿ ಯೋಜನೆ ಬಳಿ 130 ಉಪನ್ಯಾಸಕರ ಅರ್ಜಿಗಳಿವೆ. ಆದರೆ ಈವರೆಗೂ ಒಂದನ್ನು ಪರಿಗಣಿಸಿಲ್ಲ ಎಂದು ಅಧ್ಯಕ್ಷರಾದ ಮೈಷುಮಿ ಬಸು ಹೇಳಿದರು. ವಿಳಂಬವಾಗಿರುವ ಬಡ್ತಿಗೆ ಆಡಳಿತ ಮಂಡಳಿ ಅನುಮೋದನೆ ನೀಡಬೇಕು. ಅಲ್ಲದೆ ಬಡ್ತಿ ಇಲ್ಲದೆ ಕೆಲಸ ಮಾಡಿದ ವರ್ಷಗಳಿಗೆ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.